23.5 C
Karnataka
Tuesday, July 7, 2026

ಉತ್ತಮ ಸೇವೆಗಾಗಿ ಒಡಂಬಡಿಕೆ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬೆಳ್ತಂಗಡಿ ತಾಲೂಕು ಆಸ್ಪತ್ರೆ, ಬಂಟ್ವಾಳ ತಾಲೂಕು ಆಸ್ಪತ್ರೆ, ಮೂಡುಬಿದಿರೆ ಮತ್ತು ವಿಟ್ಲ ಸಮುದಾಯ ಆಸ್ಪತ್ರೆಗಳನ್ನು ಖಾಸಗಿ ಸಂಸ್ಥೆಗಳೊಂದಿಗೆ ಕರಾರು ಒಪ್ಪಂದ ನಡೆಸಲು ಸರಕಾರವು ಅನುಮೋದನೆಯನ್ನು ನೀಡಿರುತ್ತದೆ. ಕೆಲವು ಸಂಘಟನೆಗಳು ಈ ಕುರಿತು ನಕಾರಾತ್ಮಕ ವಿಷಯಗಳನ್ನು ಮಾಧ್ಯಮಗಳಲ್ಲಿ ಮತ್ತು ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಸದರಿ ವಿಷಯದ ಬಗ್ಗೆ ಈಗಾಗಲೇ ಇಲಾಖಾ ವತಿಯಿಂದ ಸ್ಪಷ್ಟೀಕರಣ ನೀಡಲಾಗಿದ್ದು, ಮತ್ತೊಮ್ಮೆ ಈ ಕೆಳಕಂಡಂತೆ ಸ್ಪಷ್ಟೀಕರಣ ನೀಡಲಾಗಿದೆ.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ತಳಮಟ್ಟದಿಂದ ಬಲಪಡಿಸಲು ಹಾಗೂ ಗ್ರಾಮೀಣ ಭಾಗದ ಜನರಿಗೆ ವಿವಿಧ ತಜ್ಞ ವೈದ್ಯರ ಸೇವೆಗಳನ್ನು ನೀಡಲು ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ವಿಸ್ತರಿಸುವ ಸಲುವಾಗಿ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳೊಂದಿಗೆ ಮಹತ್ವದ ಒಪ್ಪಂದ/ ಒಡಂಬಡಿಕೆ ( ಮಾಡಿಕೊಳ್ಳಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಈ ಮಹತ್ವಾಕಾಂಕ್ಷಿ ಒಪ್ಪಂದದ ಅಡಿಯಲ್ಲಿ, ಖಾಸಗಿ ವೈದ್ಯಕೀಯ ಕಾಲೇಜುಗಳು ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ನುರಿತ ತಜ್ಞರ ಸೇವೆಯನ್ನು, ಅರೆ ವೈದ್ಯಕೀಯ ಸಿಬ್ಬಂದಿಗಳ ಸೇವೆಯನ್ನು, ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ ಹಾಗೂ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಒದಗಿಸಲಿದ್ದು, ಇದರ ನೇರ ಲಾಭ ಜನ ಸಾಮಾನ್ಯರಿಗೆ ಸಿಗಲಿದ್ದು, ಸ್ಥಳೀಯ ಮಟ್ಟದಲ್ಲೇ ತಜ್ಞ ವೈದ್ಯರ ಚಿಕಿತ್ಸೆ ಮತ್ತು ಸುಧಾರಿತ ರೋಗನಿರ್ಣಯ ಸೌಲಭ್ಯಗಳು ಉಚಿತವಾಗಿ ದೊರೆಯಲಿರುತ್ತದೆ. ಒಡಂಬಡಿಕೆಗೆ ಒಳಪಡುವ ಆರೋಗ್ಯ ಕೇಂದ್ರದ ಅಧಿಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಪರ್ದಿಯಲ್ಲಿದ್ದು, ಖಾಸಗಿ ಸಂಸ್ಥೆಯವರು ಕೇವಲ ಉಚಿತವಾಗಿ ವೈದ್ಯಕೀಯ ಸೇವೆಯನ್ನು ನೀಡುವುದಾಗಿರುತ್ತದೆ.
ಈಗಾಗಲೇ ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ ಮತ್ತು ಸರಕಾರಿ ಲೇಡಿಗೋಷನ್ ಆಸ್ಪತ್ರೆಯು ಕೆ.ಎಂ.ಸಿ ವೈದ್ಯಕೀಯ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯನ್ನು ರಾಜ್ಯದ ಯಾವುದೇ ಇತರೆ ಜಿಲ್ಲಾ ಆಸ್ಪತ್ರೆಗಳಿಗೆ ಹೋಲಿಸಿದ್ದಲ್ಲಿ, ಉತ್ತಮ ಗುಣಮಟ್ಟದ ಸೂಪರ್ ಸ್ಪೇಷಾಲಿಟಿ ಮಟ್ಟದ ಆಸ್ಪತ್ರೆಗಳಲ್ಲಿ ಲಭ್ಯವಿರುವ ನುರಿತ ತಜ್ಞರ ಮತ್ತು ಇತರೆ ಅರೆ ವೈದ್ಯಕೀಯ ಸಿಬ್ಬಂದಿಗಳ ಸೇವೆಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಒದಗಿಸಲಾಗುತ್ತಿದೆ. ಖಾಸಗಿ ವಲಯದಲ್ಲಿ ನುರಿತ ತಜ್ಞರ ಸೇವೆಯನ್ನು ದುಬಾರಿ ಮೊತ್ತವನ್ನು ಪಾವತಿಸಿ ಪಡೆಯಬೇಕಾಗಿದ್ದು, ಆದರೆ ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯಲ್ಲಿ ಸಾರ್ವಜನಿಕರು ಉಚಿತವಾಗಿ ಸೇವೆಯನ್ನು ಪಡೆಯಬಹುದಾಗಿರುತ್ತದೆ. ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಗೆ ನೆರೆಯ 10 ರಿಂದ 15 ಜಿಲ್ಲೆಗಳಿಂದಲ್ಲದೆ ನೆರೆಯ ಕೇರಳ ರಾಜ್ಯದಿಂದಲೂ ರೋಗಿಗಳು ಸೇವೆಯನ್ನು ಪಡೆಯುತ್ತಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಹೃದ್ರೋಗಕ್ಕೆ ಸಂಬಂದಪಟ್ಟ 5 ಕೋಟಿ ವೆಚ್ಚದಲ್ಲಿ ಕ್ಯಾತ್‍ಲ್ಯಾಬ್ ಸೇವೆಯನ್ನು ಪ್ರಾರಂಭಿಸಲಾಗಿದ್ದು, ಇದುವರೆಗೆ 1000ಕ್ಕೂ ಹೆಚ್ಚು ಬಿ.ಪಿ.ಎಲ್ ರೋಗಿಗಳು ಉಚಿತವಾಗಿ ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯಲ್ಲಿ ಇದರ ಪ್ರಯೋಜನವನ್ನು ಪಡೆದಿರುತ್ತಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಉಳ್ಳಾಲ ಆರೋಗ್ಯ ಕೇಂದ್ರವು ನಗರ ಸಮುದಾಯ ಆರೋಗ್ಯ ಕೇಂದ್ರವಾಗಿ ಕಾರ್ಯಾಚರಿಸುತ್ತಿದ್ದು, ಖಾಸಗಿ ಆಸ್ಪತ್ರೆಯೊಂದಿಗೆ ಒಡಂಬಡಿಕೆ ನಡೆಸುವ ಮೊದಲು ಆಸ್ಪತ್ರೆಯಲ್ಲಿ ಪ್ರತಿದಿನ ಸರಾಸರಿ 46 ರೋಗಿಗಳು ಇದ್ದು, ಪ್ರಸ್ತುತ ಎಲ್ಲಾ ತಜ್ಞರ ಸೇವೆ, ಸ್ಕ್ಯಾಂನಿಗ್ ಹಾಗೂ ಹಲವಾರು ಪ್ರಯೋಗಶಾಲೆಯ ಪರೀಕ್ಷೆಯು ಲಭ್ಯವಿದ್ದು, ಪ್ರತಿದಿನ ಸರಾಸರಿ 400 ರಿಂದ 500 ರೋಗಿಗಳು ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ.
ಪ್ರಸ್ತುತ ಚಾಲ್ತಿಯಲ್ಲಿರುವ ಖಾಸಗಿ-ಸರಕಾರಿ ಆಸ್ಪತ್ರೆಗಳ ಒಡಂಬಡಿಕೆಯಿಂದಾಗಿ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿರುವ ಹಿನ್ನಲೆಯಲ್ಲಿ, ಬಂಟ್ವಾಳ ತಾಲೂಕು ಆಸ್ಪತ್ರೆ, ಮೂಡುಬಿದಿರೆ ಮತ್ತು ವಿಟ್ಲ ಸಮುದಾಯ ಆಸ್ಪತ್ರೆಗಳನ್ನು ಖಾಸಗಿ ಸಂಸ್ಥೆಯೊಂದಿಗೆ ಒಡಂಬಡಿಕೆಯನ್ನು ನಡೆಸಲಾಗಿರುತ್ತದೆ. ಇದರಿಂದ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಉಚಿತವಾಗಿ ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles