27.8 C
Karnataka
Saturday, July 11, 2026

ಪಡೀಲ್ ರೈಲು ನಿಲ್ದಾಣಕ್ಕೆ ಪಂಚಗಂಗಾ ಎಕ್ಸ್‌ಪ್ರೆಸ್ ನಿಲುಗಡೆ ನೀಡಿ; ಸ್ಥಳೀಯರ ದಶಕಗಳ ಬೇಡಿಕೆಗೆ ನ್ಯಾಯ ಒದಗಿಸಿ: ಎಂಎಲ್‌ಸಿ ಪಿ.ವಿ. ಮೋಹನ್

ಮಂಗಳೂರು: ಪಡೀಲ್ ರೈಲು ನಿಲ್ದಾಣದಲ್ಲಿ ಪಂಚಗಂಗಾ ಎಕ್ಸ್‌ಪ್ರೆಸ್ ಗೆ ನಿಲುಗಡೆ ನೀಡಬೇಕು ಹಾಗೂ ಸ್ಥಳೀಯರ ದಶಕಗಳ ಬೇಡಿಕೆಗೆ ನ್ಯಾಯ ಒದಗಿಸಬೇಕು ಎ೦ದು ವಿಧಾನಪರಿಷತ್ ಸದಸ್ಯರಾದ ಪಿ.ವಿ. ಮೋಹನ್ ಅವರು ಆಗ್ರಹಿಸಿದ್ದಾರೆ.

ಮಂಗಳೂರು ನಗರಕ್ಕೆ ರೈಲು ಸಂಪರ್ಕ ಆರಂಭವಾಗಿ ಸುಮಾರು 120 ವರ್ಷಗಳು ಕಳೆದಿವೆ. ದಕ್ಷಿಣ ಭಾರತದ ಪ್ರಮುಖ ರೈಲು ಕೇಂದ್ರಗಳಲ್ಲಿ ಒಂದಾದ ಮಂಗಳೂರು, ಕರಾವಳಿ ಕರ್ನಾಟಕದ ಆರ್ಥಿಕ, ಶೈಕ್ಷಣಿಕ ಹಾಗೂ ವಾಣಿಜ್ಯ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದೆ. ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ (ಕಂಕನಾಡಿ) ನಿಲ್ದಾಣಗಳು ಲಕ್ಷಾಂತರ ಜನರ ದೈನಂದಿನ ಬದುಕಿನ ಅವಿಭಾಜ್ಯ ಅಂಗಗಳಾಗಿವೆ.

ಮಂಗಳೂರು ಜಂಕ್ಷನ್ ಸ್ಥಾಪನೆಯಾಗಿದ್ದಾಗಲೇ ಪಡೀಲ್ ಪ್ರದೇಶದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಪಡೀಲ್ ರೈಲು ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಆದರೆ ಹಲವು ದಶಕಗಳು ಕಳೆದರೂ ಈ ನಿಲ್ದಾಣಕ್ಕೆ ಸಿಗಬೇಕಾದ ಅಭಿವೃದ್ಧಿ, ಅಗತ್ಯ ರೈಲು ನಿಲುಗಡೆ ಹಾಗೂ ಮೂಲಭೂತ ಸೌಲಭ್ಯಗಳು ದೊರೆತಿಲ್ಲ. ಪರಿಣಾಮವಾಗಿ ಸಾವಿರಾರು ಜನರು ಇಂದಿಗೂ ಅನಾನುಕೂಲ ಅನುಭವಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಪರಿಷತ್ ಸದಸ್ಯರಾದ ಪಿ.ವಿ. ಮೋಹನ್ ಅವರು ಇಂದು ಪಡೀಲ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆಗಳನ್ನು ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಡೀಲ್ ರೈಲು ನಿಲ್ದಾಣವು ನಿರ್ಲಕ್ಷ್ಯದ ಸಂಕೇತವಾಗಿ ಉಳಿದಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಈ ಭಾಗದ ಜನರ ನ್ಯಾಯಸಮ್ಮತ ಬೇಡಿಕೆಗಳು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿವೆ. ನಿಲ್ದಾಣದ ಸುತ್ತಮುತ್ತ ಸುಮಾರು 1,400ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ಪ್ರತಿದಿನವೂ ಜೀವದ ಹಂಗು ತೊರೆದು ರೈಲು ಹಳಿ ದಾಟಬೇಕಾಗಿದೆ. ಶಾಲಾ ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಗರ್ಭಿಣಿಯರು ಎದುರಿಸುತ್ತಿರುವ ಸಂಕಷ್ಟವನ್ನು ಯಾರೂ ಗಮನಿಸದಿರುವುದು ವಿಷಾದನೀಯ,” ಎಂದವರು ಹೇಳಿದರು.

ಅವರು ಮುಂದುವರಿದು, “ಕಾರವಾರ–ಬೆಂಗಳೂರು 16596 ಪಂಚಗಂಗಾ ಸೂಪರ್ ಎಕ್ಸ್‌ಪ್ರೆಸ್ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದರೂ ಪಡೀಲ್ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಲಾಗುತ್ತಿಲ್ಲ. ಸುರತ್ಕಲ್‌ನಲ್ಲಿ ನಿಂತು ಬಂಟ್ವಾಳದವರೆಗೆ ಯಾವುದೇ ನಿಲುಗಡೆ ಇಲ್ಲದಿರುವುದು ನ್ಯಾಯಸಮ್ಮತವೂ ಅಲ್ಲ, ಜನಸ್ನೇಹಿಯೂ ಅಲ್ಲ. ಪಡೀಲ್‌ನಲ್ಲಿ ಈ ರೈಲಿಗೆ ನಿಲುಗಡೆ ನೀಡುವುದರಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುವುದಲ್ಲದೆ, ಮಂಗಳೂರು ನಗರದ ಸಂಚಾರದ ಒತ್ತಡವೂ ಕಡಿಮೆಯಾಗಲಿದೆ. ಇದು ಯಾವುದೇ ವಿಶೇಷ ಸೌಲಭ್ಯವಲ್ಲ; ಈ ಭಾಗದ ಜನರ ಹಕ್ಕು,” ಎಂದು ಆಗ್ರಹಿಸಿದರು.

ಪಡೀಲ್ ರೈಲು ನಿಲ್ದಾಣವು ಪಾಲಕ್ಕಾಡ್ ರೈಲ್ವೆ ವಿಭಾಗದ ವ್ಯಾಪ್ತಿಗೆ ಬರುವುದರಿಂದ ಶೀಘ್ರದಲ್ಲೇ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಹಾಗೂ ಸಂಬಂಧಿತ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಪಂಚಗಂಗಾ ಎಕ್ಸ್‌ಪ್ರೆಸ್‌ಗೆ ನಿಲುಗಡೆ, ಸುರಕ್ಷಿತ ಪಾದಚಾರಿ ಮೇಲ್ಸೇತುವೆ ಅಥವಾ ಅಂಡರ್‌ಪಾಸ್ ನಿರ್ಮಾಣ ಸೇರಿದಂತೆ ಸ್ಥಳೀಯರ ಎಲ್ಲ ನ್ಯಾಯಯುತ ಬೇಡಿಕೆಗಳನ್ನು ಮಂಡಿಸುವುದಾಗಿ ಅವರು ತಿಳಿಸಿದರು.

“ಈ ವಿಚಾರದಲ್ಲಿ ರಾಜಕೀಯ ಭೇದಭಾವಕ್ಕೆ ಅವಕಾಶವಿಲ್ಲ. ಸ್ಥಳೀಯ ಲೋಕಸಭಾ ಸದಸ್ಯರು, ಶಾಸಕರು, ಜನಪ್ರತಿನಿಧಿಗಳು ಹಾಗೂ ನಾಗರಿಕ ಸಂಘಟನೆಗಳ ಸಹಕಾರದೊಂದಿಗೆ ಪಡೀಲ್ ರೈಲು ನಿಲ್ದಾಣಕ್ಕೆ ಅದರ ಯೋಗ್ಯ ಸ್ಥಾನಮಾನ ಮತ್ತು ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಡುವವರೆಗೆ ನನ್ನ ಹೋರಾಟ ಮುಂದುವರಿಯಲಿದೆ,” ಎಂದು ಎಂಎಲ್‌ಸಿ ಪಿ.ವಿ. ಮೋಹನ್ ಹೇಳಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles