ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಸಮೀಪದ ಅದ್ಯಪಾಡಿ ಗ್ರಾಮದಲ್ಲಿ ನೆಲೆಸಿರುವ ಐತಿಹಾಸಿಕ ಶ್ರೀ ಆದಿನಾಥೇಶ್ವರ ದೇವಲಾಯದ ಜೀರ್ಣೋದ್ಧಾರಕ್ಕೆ ಅದಾನಿ ಸಮೂಹವು ರೂ. 20 ಲಕ್ಷ ದೇಣಿಗೆಯನ್ನು ಘೋಷಿಸಿದೆ. ಅನುದಾನ ಪತ್ರವನ್ನು ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೆಶಕರು ಹಾಗೂ ಅಧ್ಯಕ್ಷರಾದ ಕಿಶೋರ್ ಆಳ್ವ ಅವರು ದೇವಾಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹರೀಶ್ ಶೆಟ್ಟಿಯವರಿಗೆ, ಸದಸ್ಯರಾದ ಸುಜಿತ್ ಆಳ್ವ, ಸುಕೇಶ್ ಶೆಟ್ಟಿ, ಮನೋಹರ ಶೆಟ್ಟಿಯವರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು.
ಅನುದಾನ ಪತ್ರವನ್ನು ಹಸ್ತಾಂತರಿಸಿ ಮಾತನಾಡಿದ ಅದಾನಿ ಸಮೂಹದ ಕಿಶೋರ್ ಆಳ್ವ ಅವರು, ಸುಮಾರು 900 ವರ್ಷಗಳ ಇತಿಹಾಸವುಳ್ಳ ಶ್ರೀ ಆದಿನಾಥೇಶ್ವರ ದೇವಾಲಯದ ವಾಸ್ತುಶಿಲ್ಪವು ಪುರಾತನ ದ್ರಾವಿಡ ಶೈಲಿಯಲ್ಲಿ ನಿರ್ಮಿತವಾಗಿದ್ದು ಶ್ರದ್ಧಾ, ಐತಿಹಾಸಿಕ ಘನತೆ ಹಾಗೂ ನೈಸರ್ಗಿಕ ಸೌಂದರ್ಯವನ್ನು ಒಳಗೊಂಡ ಆಧ್ಯಾತ್ಮಿಕ ತೀರ್ಥಕ್ಷೇತ್ರವಾಗಿದೆ ಎಂದು ನುಡಿದರು. ಈ ಐತಿಹಾಸಿಕ ಮಹತ್ವವನ್ನು ರಕ್ಷಿಸುವ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಅದಾನಿ ಸಮೂಹವು ರೂ. 20 ಲಕ್ಷಗಳ ಅನುದಾನವನ್ನು ಘೋಷಿಸಿದೆ ಎಂದು ಕಿಶೋರ್ ಆಳ್ವ ಅವರು ಹೇಳಿದರು.
ಅನುದಾನ ಪತ್ರವನ್ನು ಸ್ವೀಕರಿಸಿದ ಶ್ರೀ ಆದಿನಾಥೇಶ್ವರ ದೇವಾಲಯದ ಜೀರ್ಣೋದ್ದಾರದ ಸಮಿತಿಯ ಸದಸ್ಯರು ಅದಾನಿ ಸಂಸ್ಥೆಗೆ ಅಭಿನಂದಿಸುತ್ತಾ, ನೀಡಿದ ಅನುದಾನದವು ದೇವಾಲಯದ ಪಾವಿತ್ರ್ಯತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಲು ಸಹಕಾರಿಯಾಗಿದ್ದು, ವಿಶೇಷವಾಗಿ ದೇವಸ್ಥಾನದ ಪುನರ್ ನವೀಕರಣ, ಹಳೆಯ ಶಿಲಾಸ್ಮಾರಕಗಳ ಜೀರ್ಣೋದ್ಧಾರ ಮತ್ತು ಮೂಲಭೂತ ಸೌಕರ್ಯ ಸೌಲಭ್ಯವನ್ನು ಅಭಿವೃದ್ಧಿಗೊಳಿಸಲು ಅನುಕೂಲವಾಗುವುದು ಎಂದು ತಿಳಿಸಿದರು.
