ಮಂಗಳೂರು : ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರವು 2025ರ ಫೆಬ್ರವರಿ ತಿಂಗಳಿನಿಂದ ನೇರನಗದು ವರ್ಗಾವಣೆಯ ಬದಲಿಗೆ 5ಕೆ.ಜಿ ಹೆಚ್ಚುವರಿ ಅಕ್ಕಿ ಹಂಚಿಕೆಯನ್ನು ಕೊಡುವ ನಿರ್ಧಾರವನ್ನು ಕೈಗೊಂಡಿದೆ. ಈಗಾಗಲೇ 2025ರ ಫೆಬ್ರವರಿ ಮಾಹೆಯ ಪಡಿತರ ವಿತರಣೆಯು ಕೊನೆಗೊಂಡಿರುವುದರಿಂದ ಈ ತಿಂಗಳ ಹೆಚ್ಚುವರಿ ಅಕ್ಕಿಯನ್ನು ಸರಕಾರವು 2025ರ ಮಾರ್ಚ್ ತಿಂಗಳಲ್ಲ್ಲಿ ಈಗಾಗಲೇ ನೀಡುತ್ತಿರುವ ಪ್ರಮಾಣದೊಂದಿಗೆ ಹೆಚ್ಚುವರಿಯಾಗಿ 2025ರ ಫೆಬ್ರವರಿ ತಿಂಗಳ 5ಕೆ.ಜಿ ಹಾಗೂ ಮಾರ್ಚ್ ತಿಂಗಳ 5 ಕೆ.ಜಿ. ಒಟ್ಟು 10ಕೆ.ಜಿ ಅಕ್ಕಿ ಹಂಚಿಕೆಯನ್ನು ಹೆಚ್ಚುವರಿಯಾಗಿ ಅನ್ನಭಾಗ್ಯ ಯೋಜನೆಯಡಿ ಬಿಡುಗಡೆ ಮಾಡಿರುತ್ತದೆ.
2025 ರ ಮಾರ್ಚ್ ತಿಂಗಳ ವಿತರಣಾ ಪ್ರಮಾಣ:- ಅಂತ್ಯೋದಯ ಪಡಿತರ ಚೀಟಿಗಳಲ್ಲಿ 4ಕ್ಕಿಂತ ಕಡಿಮೆ ಸದಸ್ಯರಿದ್ದಲ್ಲಿ ಈಗಾಗಲೇ ನೀಡುತ್ತಿರುವ 35 ಕೆ.ಜಿ ಮಾತ್ರ.
ಅಂತ್ಯೋದಯ ಪಡಿತರ ಚೀಟಿಗಳಲ್ಲಿ 4 ಹಾಗೂ 4ಕ್ಕಿಂತ ಹೆಚ್ಚಿನ ಸದಸ್ಯರಿದ್ದಲ್ಲಿ ಪ್ರತೀ ಸದಸ್ಯನಿಗೆ 10 ಕೆ.ಜಿಯಂತೆ ಈಗಾಗಲೇ ನೀಡುತ್ತಿರುವ 35 ಕೆ.ಜಿ ಯೊಂದಿಗೆ ವ್ಯತ್ಯಾಸದ ಪ್ರಮಾಣವನ್ನು ಹೆಚ್ಚುವರಿಯಾಗಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಪ್ರಮಾಣದೊಂದಿಗೆ ಉಚಿತವಾಗಿ ಪಡೆಯಬಹುದು.
ಅದ್ಯತಾ ಪಡಿತರ ಚೀಟಿಗಳ ಪ್ರತೀ ಸದಸ್ಯನಿಗೆ ಈಗಾಗಲೇ ನೀಡುತ್ತಿರುವ 5ಕೆ.ಜಿ ಯೊಂದಿಗೆ ಹೆಚ್ಚುವರಿಯಾಗಿ 10 ಕೆ.ಜಿ(5ಕೆ ಜಿ ಫೆಬ್ರವರಿ ಹಾಗೂ 5ಕೆ ಜಿ ಮಾರ್ಚ್) ಒಟ್ಟು 15ಕೆ ಜಿ ಉಚಿತವಾಗಿ ಪಡೆಯಬಹುದು.
ಪ್ರತೀ ಪಡಿತರ ಚೀಟಿದಾರರು ಪಡಿತರ ಪಡೆಯುವಾಗ ನ್ಯಾಯಬೆಲೆ ಅಂಗಡಿಗಳಲ್ಲಿ ಜೀವಮಾಪನ ನೀಡುವ ತಂತ್ರಾಂಶದಲ್ಲಿ ತೋರ್ಪಡಿಸುವ ಪ್ರಮಾಣದನುಸಾರ ಪಡಿತರ ಪಡೆಯುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

