ಮಂಗಳೂರು :ಇಸ್ಪೀಟ್ ಅಡ್ಡೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಜೂಜಾಟ ಆಡುತ್ತಿದ್ದ 29 ಮ೦ದಿಯನ್ನು ಬ೦ಧಿಸಿ 1.75 ಲಕ್ಷ ರೂ. ವಶ ಪಡಿಸಿಕೊ೦ಡಿದ್ದಾರೆ.
ಮೂಲ್ಕಿ ಪೊಲೀಸ್ ಠಾಣಾ ಸರಹದ್ದಿನ ಮಂಗಳೂರು ತಾಲೂಕು ಕಿಲ್ಪಾಡಿ ಗ್ರಾಮದ ಬಂಡಸಾಲೆ ಎಂಬಲ್ಲಿ ಮನೆಯೊಂದರಲ್ಲಿ ಕೆಲವು ಜನರು ಸೇರಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅಂದರ್-ಬಾಹರ್(ಉಲಾಯಿ-ಪಿದಾಯಿ) ಜೂಜಾಟ ಆಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ಜ.21 ರ೦ದು ಬೆಳಗಿನ ಜಾವ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು 29 ಮ೦ದಿಯನ್ನು ಬ೦ಧಿಸಿದ್ದಾರೆ..ಆರೋಪಿಗಳಿ೦ದ 1,75,450 ರೂ ನಗದು ಹಣ ,ಆಟಕ್ಕೆ ಬಳಸಿದ 4 ಟೇಬಲ್,10 ಚೇರ್ ಹಾಗೂ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಜೂಜಾಟವನ್ನು ನಿತ್ಯಾನಂದ ,ವಿಲ್ಫ್ರೇಡ್ ಮತ್ತು ರೆಹಮಾನ್ ಎಂಬವರು ಆಡಿಸುತ್ತಿದ್ದು ಓಡಿ ಹೋಗಿ ತಪ್ಪಿಸಿಕೊಂಡಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನ, ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಅವರ ನೇತೃತ್ವದಲ್ಲಿ ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಯವರು ನಡೆಸಿದ್ದಾರೆ..
