ಮ೦ಗಳೂರು: ಲೋಕಾಯುಕ್ತ ಪೊಲೀಸ್ ನಿರೀಕ್ಷಕರಿಗೇ ಲಂಚದ ಅಮಿಷೆ ಒಡ್ಡಿದ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಯನ್ನು ಮಂಗಳೂರು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಗಜೇಂದ್ರ ವಿ ಎಡಕೆ ಲಂಚದ ಅಮಿಷೆ ಒಡ್ಡಿದ ಅಧಿಕಾರಿ

ಪಿರ್ಯಾದಿದಾರರಾದ ಪೊಲೀಸ್ ನಿರೀಕ್ಷಕರು ಮೇ 30 ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿರುವ ಸಮಯ ಬೆಳಿಗ್ಗೆ 11.15 ಗಂಟೆಯ ಸುಮಾರಿಗೆ ನಗರದ ಆಯಿಲ್ ಇಂಡಸ್ಟ್ರಿಸ್ ಮಾಲಕರೋರ್ವರು ಮತ್ತು ಗಜೇಂದ್ ಲೋಕಾಯುಕ್ತ ಪೊಲೀಸ್ ಠಾಣೆಗೆ ಬಂದು ಪೊಲೀಸ್ ನಿರೀಕ್ಷಕರಿಗೆ ಮಾಹಿತಿ ನೀಡಬೇಕು ಎಂಬುದಾಗಿ ಠಾಣೆಯ ಸಿಬ್ಬಂದಿಯವರಲ್ಲಿ ತಿಳಿಸಿದರು. ನಂತರ ಪಿರ್ಯಾದಿದಾರರಾದ ಪೊಲೀಸ್ ನಿರೀಕ್ಷಕರವರಲ್ಲಿ ಮಾತನಾಡುತ್ತಾ ತನ್ನ ವಿರುದ್ಧ ಹಾಗೂ ತನ್ನ ಇಲಾಖೆಯ ವಿರುದ್ಧ ಲೋಕಾಯುಕ್ತ ಸಂಸ್ಥೆಯಿಂದ ಯಾವುದೇ ಪ್ರಕರಣ ದಾಖಲಿಸಬಾರದು ಅಥವಾ ದಾಳಿ ಮಾಡಬಾರದು ಎಂಬುದಾಗಿ ತಿಳಿಸಿ ತಾನು 3 ತಿಂಗಳಿಗೊಮ್ಮೆ 25,000 ರೂ – ಹಣವನ್ನು ಲಂಚವಾಗಿ ಮಂಗಳೂರು ಲೋಕಾಯುಕ್ತ ಠಾಣೆಗೆ ನೀಡುವುದಾಗಿ ಪಿರ್ಯಾದಿದಾರರಿಗೆ ಲಂಚದ ಅಮಿಷ ಒಡ್ಡಿರುತ್ತಾರೆ. ಈ ಬಗ್ಗೆ ಗಜೇಂದ್ರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.
ಲಂಚ ಹಣ ನೀಡುವುದಾಗಿ ಆಮೀಷ ಒಡ್ಡಿದ ಗಜೇಂದ್ರ ವಿ ಎಡಕೆಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.ಕಾರ್ಯಾಚರಣೆಯಲ್ಲಿ ಕುಮಾರಚಂದ್ರ, ಪೊಲೀಸ್ ಅಧೀಕ್ಷಕರು (ಪ್ರಭಾರ), ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್, ಸುರೇಶ್ ಕುಮಾರ್.ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ರವರು ಸಿಬ್ಬಂದಿಗಳ ಜೊತೆ ಕಾನೂನು ಕ್ರಮ ಕೈಗೊಂಡಿರುತ್ತಾರೆ.
