ಮಂಗಳೂರು : ಅಕ್ಷರ ಲೋಕಕ್ಕೆ ಪ್ರಬಲವಾದ ಶಕ್ತಿ ಇದೆ. ಇಂದಿನ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಓದುವ ಅಭಿರುಚಿ ಬೆಳೆಸುವುದು ಅವಶ್ಯವಾಗಿದೆ. ಗೂಗಲ್ ಬದಲು ಗ್ರಂಥಾಲಯ ಅವಲಂಬಿಸಲು ಪ್ರೇರಣೆ ನೀಡಬೇಕು ಎಂದು ಜಾನಪದ ವಿದ್ವಾಂಸ, ಹಿರಿಯ ಸಾಹಿತಿ ಡಾ.ಗಣೇಶ್ ಅಮೀನ್ ಸಂಕಮಾರ್ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಯೋಜಿಸಿದ ಹಿರಿಯ ಸಾಹಿತಿಗಳ ಸಂಪರ್ಕ ಅಭಿಯಾನದಡಿ ಭಾನುವಾರ ಸ್ವಗೃಹದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು ಸಾಹಿತ್ಯದ ಮೂಲಬೇರು ನಮ್ಮ ಜನಪದದಲ್ಲಿದೆ. ಬದುಕಿನ ನೋವು ಜನಪದ ಸಾಹಿತ್ಯದ ಮೂಲಕ ಹೊರಹೊಮ್ಮಲು ಸಾಧ್ಯವಾಗಿದೆ. ಸಾಹಿತಿಗಳು ಮನಸ್ಸುಗಳನ್ನು ಕಟ್ಟುವ ಜತೆಗೆ ಸಮಾಜದ ಧ್ವನಿಯಾಗಬೇಕು ಎಂದರು.
ಇಂದು ಸಾಹಿತ್ಯ ಸಮ್ಮೇಳನಗಳು ರಾಜಕೀಯ ಅಬ್ಬರದ ಪ್ರದರ್ಶನವಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಸಮ್ಮೇಳನ ನಿಜಾರ್ಥದಲ್ಲಿ ಸಾಹಿತಿಗಳ ಸಮ್ಮೇಳನವಾಗ ಬೇಕು ಎಂದು ಡಾ.ಸಂಕಮಾರ್ ಅಭಿಪ್ರಾಯ ಪಟ್ಟರು.
ಅಭಾಸಾಪಜಿಲ್ಲಾ ಖಜಾಂಜಿ ಭಾಸ್ಕರ ರೈ ಕಟ್ಟ, ಸಾಹಿತ್ಯ ಕೂಟದ ಮುಖ್ಯಸ್ಥೆ ಗೀತಾ ಲಕ್ಷ್ಮೀಶ್, ಮೂಲ್ಕಿ ಘಟಕದ ಅಧ್ಯಕ್ಷ ಸರ್ವೋತ್ತಮ ಅಂಚನ್, ಕಾಯ ಕಾರಿ ಸಮಿತಿ ಸದಸ್ಯ ಯಾದವ ದೇವಾಡಿಗ, ನಾಟ್ಯರಾಧನಾ ಕಲಾ ಕೇಂದ್ರದ ಟ್ರಸ್ಟಿ ಬಿ.ರತ್ನಾಕರ ರಾವ್, ಜಯಂತಿ ಸಂಕಮಾರ್, ಭವ ಸಂಕಮಾರ್ ಕಾಪಸ್ಥಿತರಿದ್ದರು. ಅಭಾಸಾಪ ದ.ಕ.ಜಿಲ್ಲಾಧ್ಯಕ್ಷ ಪಿ. ಬಿ.ಹರೀಶ್ ರೈ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸುಮಂಗಲಾ ರತ್ನಾಕರ್ ವಂದಿಸಿದರು.
