ಮ೦ಗಳೂರು: ಕುಂಬಳೆ ಸೀಮೆಯ ಹಾಗೂ ಉತ್ತರ ಕೇರಳದ ಪ್ರಸಿದ್ದ ದೇವಾಲಯವಾದ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯವು ಇದೀಗ ಅಷ್ಟಬಂಧ ಬ್ರಹ್ಮಕಲಶೋತ್ಸವ – ಮೂಡಪ್ಪ ಸೇವೆಯ ಸಂಭ್ರಮದಲ್ಲಿದೆ. ಮಾ. 27 ರಿಂದ ಏ. 7ರ ತನಕ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶ ಮತ್ತು ಮೂಡಪ್ಪ ಸೇವೆ ಇತ್ಯಾದಿ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎ೦ದು ಮಧುಸೂಧನ್ ಅಯಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
. ಮಲಬಾರ್ ದೇವಸ್ವಮ್ ಮಂಡಳಿಯ ರೂಪೀಕರಿಸಿದ ನವೀಕರಣ ಸಮಿತಿಯು ಕ್ಷೇತ್ರದ ನವೀಕರಣದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು ಈಗ ಎಲ್ಲಾ ಕಾಮಗಾರಿಗಳು ಅಂತಿಮ ಹಂತ ತಲುಪಿದೆ.ಕಾರ್ಯಕ್ರಮಕ್ಕೆ ಬೇರೆ ಬೇರೆ ಭಾಗಗಳಿಂದ ಸುಮಾರು ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ವಾಹನ ಪಾರ್ಕಿಂಗ್ ಮಾಡಲು ಮಧೂರು ಬಯಲು, ಕೊಟ್ಟ ಬಯಲು, ಕೊಲ್ಕ ಏರಿಕ್ಕಳ ಬಯಲು, ಚಿನಕ್ಕೋಡು ಬಯಲುಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ವಿ.ಐ.ಪಿಗಳ ವಾಹನಗಳಿಗೆ ಪಾಸ್ ನೀಡಲಾಗುವುದು. ಬಸ್ ಸೌಕರ್ಯ ಪರಕ್ಕಿಲ ತನಕ ಮಾತ್ರ ಇರುವುದು. ನಡೆದು ಬರಲು ಅಶಕ್ತರಾದವರಿಗೆ ವಿಶೇಷ ವಾಹನ ಸೌಕರ್ಯ ಕಲ್ಪಿಸುವ ಆಲೋಚನೆ ಇದೆ. ಆರೋಗ್ಯ ಇಲಾಖೆ ಮತ್ತು ವಿವಿಧ ಆಸ್ಪತ್ರೆಗಳ ಸಹಕಾರದಿಂದ 24 ಘಂಟೆಗಳ ಕಾಲ ಆರೋಗ್ಯಕ್ಕೆ ಸಂಬಂಧಿಸಿದ ಸೇವೆ ಒದಗಿಸಲಾಗುವುದು ಎ೦ದರು.

ಸೀಮೆಯ ವಿವಿಧ ಭಾಗಗಳಿಂದ ಹಾಗು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ವಿಟ್ಲ, ಸುಳ್ಯ ಮೊದಲಾದ ಸ್ಥಳಗಳಿಂದ ಕರಸೇವಕರು ಕ್ಷೇತ್ರಕ್ಕೆ ಆಗಮಿಸಿ ಸೇವೆ ಸಲ್ಲಿಸುತ್ತಿದ್ದು. ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸುಮಾರು 10 ಕೋಟಿ ರೂಗಳ ಯೋಜನೆಯನ್ನು ತಯಾರಿಸಲಾಗಿದೆ. ಕ್ಷೇತ್ರದ ಭಕ್ತಾಭಿಮಾನಿಗಳು ಉದಾರವಾಗಿ ನೀಡುವ ದೇಣಿಗೆಯೇ ನಮಗೆ ಶ್ರೀರಕ್ಷೆ ಎಂದವರು ಹೇಳಿದರು.
ಕ್ಷೇತ್ರದ ನವೀಕರಣ ಕಾಮಗಾರಿಗಳಿಗೆ ಇದೀಗ ಸುಮಾರು 24 ಕೋಟಿ ರೂಗಳನ್ನು ಖರ್ಚು ಮಾಡಲಾಗಿದೆ. ಇದರ ಫಲವಾಗಿ ಕ್ಷೇತ್ರವು ಇಂದು ಸುಂದರವೂ ಭವ್ಯವೂ ಆಗಿ ಕಂಗೊಳಿಸುತ್ತಿದೆ. ಪ್ರಧಾನ ದೇಗುಲದ ನವೀಕರಣ, ಉಪದೇವತೆಗಳ `ಗುಡಿಗಳ ನವೀಕರಣ, ಶಿಲಾಮಯ ವೀರಭದ್ರನ ಗುಡಿ ನಿರ್ಮಾಣ, ಸುತ್ತು ಪೌಳಿಗಳ ದುರಸ್ಥಿ ಕಾರ್ಯ, ಪೌಳಿಗಳ ನೆಲಕ್ಕೆ ಗ್ರಾನೈಟ್ ಅಳವಡಿಸುವಿಕೆ, ಒಳ ಅಂಗಣಕ್ಕೆ ಕಗ್ಗಲ್ಲಿನ ಚಪ್ಪಡಿಗಳನ್ನು ಅಳವಡಿಸುವಿಕೆ, ಒಳ ಚರಂಡಿ ಕಾಮಗಾರಿ, ಗಣಪತಿ ದೇವರ ಮುಖಮಂಟಪ, ಶಿವ ದೇವರ ನಡೆ, ರಾಜಾಂಗಣ, ನವೀಕರಣ, ನೈವೇದ್ಯ ಕೋಣೆಯ ಪುನರ್ ನಿರ್ಮಾಣ, ಅಣ್ಣ ಛತ್ರ, ಯಾತ್ರಿ ನಿವಾಸ, ಸೇವಾ ಕೌಂಟರ್. ಶಿಲಾಮಯ ಸುಂದರ ಮಹಾದ್ವಾರ, ಹೊರಾಂಗಣಕ್ಕೆ ಚಪ್ಪಡಿ ಹಾಗೂ ಇಂಟರ್ ಲಾಕ್ ಅಳವಡಿಸುವ ಕೆಲಸ, ವೇಸ್ಟ್ ವಾಟರ್ ಮ್ಯಾನೇಜೆಂಟ್ ಪ್ಲಾಂಟ್, ಪಶ್ಚಿಮ ಭಾಗದ ಕಾಂಪೌಂಡ್ ವಾಲ್, ಮೂಲಸ್ಥಾನದಲ್ಲಿ ಸವಾರಿ ಕಟ್ಟೆಯ ನವೀಕರಣ, ಪಂಜುರ್ಲಿ ಗುಡಿ, ಮದರು ಮಂಟಪ ನಿರ್ಮಾಣ ಇತ್ಯಾದಿ ಹಲವು ಕಾಮಗಾರಿಗಳನ್ನು ನವೀಕರಣ ಸಮಿತಿಯು ನಿರ್ವಹಿಸಿದೆ. ಭಕ್ತರು ನವೀಕರಣಕ್ಕೆ ನೀಡಿದ ದೇಣಿಗೆಯಲ್ಲದೆ ಮಲಬಾರ್ ದೇವಸ್ವಮ್ ಬೋರ್ಡ್, ಭಕ್ತಜನ ಸಮಿತಿ, ಸಿದ್ಧಿವಿನಾಯಕ ಸೇವಾ ಸಮಿತಿಗಳು ಸಹ ಸಹಾಯಧನ ನೀಡಿವೆ. ದಾನಿಗಳಾದ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ, ಕೆ ಕೆ ಶೆಟ್ಟಿ ಮುಂಡಪಳ್ಳ, ಮಹಾಬಲೇಶ್ವರ ಭಟ್ ಎಡಕ್ಕಾನ, ಡಾ| ಬಿ ಎಸ್ ರಾವ್, ಶಶಿಕಿರಣ್ ಶೆಟ್ಟಿ, ವಿಟ್ಲ ಈಶ್ವರ ಭಟ್, ಟಿ ಶಾಮ್ ಭಟ್, ರವೀಂದ್ರ ಆಳ್ವ ಕೋಟೆಕುಂಜ, ಶ್ರಿ ಕ್ಷೇತ್ರ ಧಮ೯ಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಬಿ ಕೆ ಮಧೂರು ಉದಾರವಾಗಿ ದೇಣಿಗೆಯನ್ನು ನೀಡಿ ನಮಗೆ ಬೆನ್ನೆಲುಬಾಗಿ ಸಹಕರಿಸಿದ್ದಾರೆ ಎಂದರು.
ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನಪ್ರಸಾದ ವ್ಯವಸ್ಥೆ ಇರುವುದು. 24 ಗಂಟೆಗಳ ಕಾಲ ಕ್ಯಾಂಟೀನ್ ಚಾಲ್ತಿಯಲ್ಲಿರುವುದು, ಪಾಕಶಾಲೆಗಳಲ್ಲಿ ಈಗಾಗಲೇ ಬೃಹತ್ ನಲ್ಲಿಗಳ ವ್ಯವಸ್ಥೆ ಪೂರ್ಣವಾಗಿದೆ. ನೀರಿನ ಪೂರೈಕೆಗಾಗಿ ಈಗಾಗಲೇ ಐದು ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಅಗತ್ಯವಿರುವ ಅತಿಥಿಗಳಿಗೆ ವಸತಿ ಸೌಕರ್ಯ ವ್ಯವಸ್ಥೆ ಮಾಡಲಾಗಿದೆ.ಕ್ಷೇತ್ರದ ಈಶಾನ್ಯ ಭಾಗದಲ್ಲಿರುವ ಕೊಲ್ಯದ ಬಯಲಿನ ಬಲಭಾಗದಲ್ಲಿ ಬೃಹತ್ ಜರ್ಮನ್ ಟೆಂಟ್ ಚಪ್ಪರಗಳು ತಲೆ ಎತ್ತಿದ್ದು ಇಲ್ಲಿ ಎರಡು ವೇದಿಕೆಗಳು, ಪಾಕಶಾಲೆ, ಉಗ್ರಾಣ ಮೊದಲಾದ ವ್ಯವಸ್ಥೆಗಳಲ್ಲದೆ ಭಕ್ತರಿಗೆ ಅನ್ನಪ್ರಸಾದ ವಿತರಣೆಯ ಸೌಕರ್ಯವನ್ನು ಏರ್ಪಡಿಸಲಾಗಿದೆ. ಕುಳಿತು ಊಟ ಮಾಡುವ ಮತ್ತು ಬಫೆಟ್ ವ್ಯವಸ್ಥೆಯ ಊಟದ ವ್ಯವಸ್ಥೆಗಳಿವೆ. ಈಗಾಗಲೇ ಊಟದ ಪ್ಲೇಟುಗಳನ್ನು ಸಂಗ್ರಹಿಸಲಾಗಿದೆ. ಹೊರೆಕಾಣಿಕೆಯಲ್ಲಿ ಊಟದ ಎಲೆ ,ತರಕಾರಿಗಳು ಧಾರಾಳ ಬರುವ ನಿರೀಕ್ಷೆ ಇದೆ. ಕ್ಷೇತ್ರದ ತೆಂಕು ಭಾಗದ ಪದಾರ್ಥಿ ಬಯಲಿನಲ್ಲಿ ಒಂದು ವೇದಿಕೆ ಮತ್ತು ಊಟದ ಹಾಲ್ ಮತ್ತು ಪಾಕಶಾಲೆಯ ವ್ಯವಸ್ಥೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ತಿಕ್ ಶೆಟ್ಟಿ ಮಜಿಬೈಲು,ಸುಕುಮಾರ್ ಕುದ್ರೆಪಾಡಿ,ರಾಜೇಶ್ ಮಾಸ್ಟರ್ ಅಗಲ್ಪಾಡಿ,ವಿಜಯ್ ರೈ ಮಲ್ಲಂಗೈ ಹಾಗೂ ಚಂದ್ರಕಾಂತ್ ಶೆಟ್ಟಿಯವರು ಉಪಸ್ಥಿತರಿದ್ದರು
