ಮಂಗಳೂರು : ದ.ಕ.ಜಿಲ್ಲೆಯನ್ನು “ಸಂಪೂರ್ಣ ಸಾಕ್ಷರ ಜಿಲ್ಲೆ” ಎಂದು ಘೋಷಿಸುವುದು ಒಂದು ಪ್ರಮುಖ ಕಾರ್ಯವಾಗಿದ್ದು, ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಟ್ಟು ಅನಕ್ಷರಸ್ಥರ ಸಂಖ್ಯೆಯನ್ನು ಕಂಡುಹಿಡಿಯುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ತಮ್ಮ ತಮ್ಮ ಮನೆಯಲ್ಲಿರುವ ಅನಕ್ಷರಸ್ಥರ ಮಾಹಿತಿಯನ್ನು ಕ್ಯೂ ಆರ್ ಕೋಡ್ ಅನ್ನು ಗೂಗಲ್ ಮುಖಾಂತರ ಸ್ಕ್ಯಾನ್ ಮಾಡಿ ಜೂನ್ 10 ರೊಳಗೆ ಕಡ್ಡಾಯವಾಗಿ ಮಾಹಿತಿಯನ್ನು ತುಂಬಬೇಕು.
ಸೂಚನೆಗಳು :- ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಟ್ಟು ಅನಕ್ಷರಸ್ಥರ ಸಂಖ್ಯೆಯನ್ನು ಕಂಡುಹಿಡಿಯುವ ಉದ್ದೇಶ ಮಾತ್ರ ಹೊಂದಿದ್ದು ಸಾರ್ವಜನಿಕರು ಯಾವುದೇ ಗೊಂದಲ, ಭಯ ಪಡುವುದು ಬೇಡ. ಈಗಾಗಲೇ ಸಾಕ್ಷರತಾ ಇಲಾಖೆಯಲ್ಲಿ ಕಲಿತಿರುವ ಹಾಗೂ ಕಲಿಯುತ್ತಿರುವವರನ್ನು ಪಟ್ಟಿಯಲ್ಲಿ ಸೇರಿಸಬಾರದು. ಕರ್ನಾಟಕ ರಾಜ್ಯದಲ್ಲಿ ದ.ಕ.ಜಿಲ್ಲೆಯನ್ನು ಸಂಪೂರ್ಣ ಸಾಕ್ಷರ ಜಿಲ್ಲೆ ಎಂದು ಪ್ರಪ್ರಥಮವಾಗಿ ಘೋಷóಣೆಯಾಗಲಿ ಎಂದು ಇಲಾಖೆಯ ಆಶಯವಾಗಿದೆ. ಒಂದು ವೇಳೆ ಅನಕ್ಷರಸ್ಥರು ಕಲಿಯಲು ಇಚ್ಚಿಸಿದಲ್ಲಿ ಕಲಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅನಕ್ಷರಸ್ಥರು ಕಲಿಯಲು ಶಕ್ತರಿಲ್ಲದಿದ್ದರೂ ಗೂಗಲ್ ಫಾರಂ ತುಂಬುವುದು ಕಡ್ಡಾಯ. ಅನಕ್ಷರಸ್ಥರ ಹೆಸರು,ಅವರು ವಾಸವಿರುವ ತಾಲೂಕಿನ ಹೆಸರು, ಗ್ರಾಮ ಪಂಚಾಯತ್/ಪಟ್ಟಣದ ಹೆಸರು/ಪುರಸಭೆಯ ಹೆಸರು, ಅವರು ವಾಸವಿರುವ ಸ್ಥಳದಲ್ಲಿ ಇರುವ ಹತ್ತಿರದ ಶಾಲೆಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಪ್ರಸ್ತುತ ವಿಳಾಸ, ವಯಸ್ಸು, ಲಿಂಗ, ಮೊಬ್ಯೆಲ್ ನಂಬರ್, ಆಧಾರ್ ಸಂಖ್ಯೆ, ಜಾತಿ,ವೃತ್ತಿ,ವಿಕಲಚೇತನರೇ? ಎಂಬ ಎಲ್ಲಾ ಮಾಹಿತಿಯನ್ನು ಗೂಗಲ್ ಫಾರಂನಲ್ಲಿ ತುಂಬಬೇಕು. ಅಕ್ಷರಸ್ಥರ ಸಂಖ್ಯೆ 95 % ದಾಟಿದರೆ ಇಲಾಖೆಯ ಆದೇಶದ ಮೇರೆಗೆ ದ.ಕ.ಜಿಲ್ಲೆಯನ್ನು ಸಂಪೂರ್ಣ ಸಾಕ್ಷರ ಜಿಲ್ಲೆ ಎಂದು ಘೋಷಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕಛೇರಿ ದೂರವಾಣಿ ಸಂ. 08242451233 ಸಂಪರ್ಕಿಸಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
