23.2 C
Karnataka
Saturday, June 14, 2025

ಡಿಎಪಿಗೆ ಪರ್ಯಾಯ ಸಂಯುಕ್ತ ರಸಗೊಬ್ಬರ ಬಳಕೆ

ಮಂಗಳೂರು : ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ದಿಗೆ ಹದಿನೇಳು ಪೋಷಕಾಂಶಗಳ ಅಗತ್ಯವಿರುತ್ತದೆ. ಇವುಗಳಲ್ಲಿ ಇಂಗಾಲ, ಜಲಜನಕ ಮತ್ತು ಆಮ್ಲಜನಕ ಸ್ವಾಭಾವಿಕವಾಗಿ ಗಾಳಿ ಮತ್ತು ನೀರಿನ ಮೂಲಕ ಸಸ್ಯಗಳಿಗೆ ಲಭ್ಯವಾಗುತ್ತದೆ. ಉಳಿದ ಹದಿನಾಲ್ಕು ಪೋಷಕಾಂಶಗಳಲ್ಲಿ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಸಸ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಕಿರುತ್ತದೆ. ಲಘು ಪೋಷಕಾಂಶಗಳು ಕಡಿಮೆಯಾದರೂ ಸಸ್ಯಗಳ ಮೇಲೆ ಪ್ರಭಾವ ಬೀರಿ ಇಳುವರಿ ಕಡಿಮೆಯಾಗಬಹುದು.
ಡಿಎಪಿಯು ಸಾರಜನಕ ಮತ್ತು ರಂಜಕ ಅಧಿಕವಾಗಿರುವ ಗೊಬ್ಬರವಾಗಿದ್ದು ಸಂಯುಕ್ತ ಗೊಬ್ಬರಗಳು ಸಾರಜನಕ, ರಂಜಕ ಮತ್ತು ಪೊಟ್ಯಾಷಿಯಂ ಸೇರಿದಂತೆ ಬಹು ಪೋಷಕಾಂಶಗಳ ಮಿಶ್ರಣಗಳಾಗಿವೆ. ಪ್ರಾಥಮಿಕ ಹಂತದಲ್ಲಿ ಡಿಎಪಿ ಬಳಕೆಯನ್ನು ಕಡಿಮೆ ಮಾಡಬೇಕು ಏಕೆಂದರೆ ಮಣ್ಣಿನಲ್ಲಿ ರಂಜಕದ ಶೇಖರಣೆ ಹೆಚ್ಚಾಗುತ್ತದೆ. ಇದು ಇತರ ಅಗತ್ಯ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಡಿಎಪಿಯ ಅತ್ಯಂತ ವೇಗವಾಗಿ ಕರಗಿ ಹೋಗುವ ಹಾಗು ಆವಿಯಾಗುವ ಗುಣವು ಪರಿಸರ ಮಾಲಿನ್ಯ ಮತ್ತು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಅಲ್ಲದೆ ಕ್ಷಾರೀಯ ಅಂದರೆ ಪಿಎಚ್ ಅಧಿಕವಾಗಿರುವ (<7) ಮಣ್ಣಿನಲ್ಲಿ ಸಸ್ಯಗಳ ಬೇರುಗಳಿಗೆ ವಿಷಕಾರಿ ಅಮೋನಿಯಂ ಅನ್ನು ಬಿಡುಗಡೆಗೊಳಿಸಿ ಸಸ್ಯಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹುಳಿ ಮಣ್ಣು ಇರುವುದರಿಂದ ಡಿಎಪಿ ಬಳಸುವುದು ಸೂಕ್ತವಲ್ಲ. ಏಕೆಂದರೆ ಇದು ಮಣ್ಣನ್ನು ಇನ್ನೂ ಹೆಚ್ಚು ಹುಳಿಯನ್ನಾಗಿಸಿ ಪೋಷಕಾಂಶಗಳನ್ನು ಗಿಡಗಳಿಗೆ ಸಿಗದ ಹಾಗೆ ಮಾಡುತ್ತದೆ. ಆದುದರಿಂದ ನಿರ್ದಿಷ್ಟ ಪೋಷಕಾಂಶಗಳ ಕೊರತೆಯನ್ನು ನಿರ್ಧರಿಸಲು ಮತ್ತು ಅದಕ್ಕೆ ಅನುಗುಣವಾಗಿ ರಸಗೊಬ್ಬರ ಅನ್ವಯಿಕೆಗಳನ್ನು ಹೊಂದಿಸಲು ಮಣ್ಣಿನ ಪರೀಕ್ಷೆಗಳನ್ನು ನಡೆಸುವುದು ಬಹಳ ಮುಖ್ಯ. ಹಾಗಾಗಿ ಡಿಎಪಿಗೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳನ್ನು ಬಳಸುವುದರಿಂದ ಸಮತೋಲಿತ ಪೌಷ್ಟಿಕಾಂಶಗಳನ್ನು ಸಸ್ಯಗಳಿಗೆ ಒದಗಿಸಬಹುದಾಗಿದೆ.
ಪ್ರಧಾನ ಪೋಷಕಾಂಶಗಳು ಮತ್ತು ಲಘು ಪೋಷಕಾಂಶಗಳಿಗೆ ಭೂಮಿಯೇ ಮುಖ್ಯ ಆಧಾರ. ಮಣ್ಣಿನಿಂದ ಈ ಎಲ್ಲಾ ಪೋಷಕಾಂಶಗಳು ಬೆಳೆಗಳಿಗೆ ಬೇಕಾದ ಪ್ರಮಾಣದಲ್ಲಿ ದೊರೆಯುವುದಿಲ್ಲ. ಆದುದರಿಂದ ಬಾಹ್ಯವಾಗಿ ನೀಡುವುದು ಅನಿವಾರ್ಯ. ಬೆಳೆಗಳಿಗೆ ಬೇಕಾದ ಈ ಬಾಹ್ಯ ಪೋಷಕಾಂಶಗಳನ್ನು ಸಾವಯವ (ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ ಹಿಂಡಿ ಇತ್ಯಾದಿ) ಮತ್ತು ರಸಗೊಬ್ಬರಗಳಿಂದ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯುವ ರೂಪದಲ್ಲಿದ್ದು ಅವುಗಳ ಬಳಕೆ ಅತ್ಯಗತ್ಯವಾಗಿರುತ್ತದೆ.
ಭತ್ತ ಬೆಳೆಗೆ ಸಾರಜನಕ, ರಂಜಕ ಮತ್ತು ಪೊಟ್ಯಾಷಿಯಂ ನಂತರÀ ಪ್ರಮುಖ ಪೊಷಕಾಂಶಗಳ ಅವಶ್ಯಕತೆ ತುಂಬಾ ಇರುತ್ತದೆ. ಮಂಗಳೂರು ಪ್ರದೇಶದಲ್ಲಿ ಡಿಎಪಿಗೆ ಪರ್ಯಾಯವಾಗಿ NPK ಅಂತಹ ರಸಗೊಬ್ಬರಗಳ ಜೊತೆಗೆ ಹಸಿರು ಎಲೆ, ಕಾಂಪೋಸ್ಟ್ ಮತ್ತು ಗದ್ದೆ ಗೊಬ್ಬರದಂತಹ ಸಾವಯವ ಪರ್ಯಾಯಗಳು ಭತ್ತ, ತೆಂಗು, ಅಡಿಕೆ ಬೆಳೆಗೆ ಪ್ರಯೋಜನಕಾರಿಯಾಗಿದೆ. ತೆಂಗಿನ ಬೆಳೆಗೆ ಸನ್‍ಹೆಂಪ್, ತೆಂಗಿನಕಾಯಿ ಪಿತ್ ಕಾಂಪೋಸ್ಟ್ ಅಥವಾ ವರ್ಮಿ ಕಾಂಪೋಸ್ಟ್‍ನ್ನು NPK ಗಳ ಜೊತೆಗೆ ಬಳಸಬಹುದಾಗಿದೆ. ಅಡಿಕೆ ಬೆಳೆಗೆ NPK ರಾಕ್ ಫಾಸ್ಪೇಟ್ ಮತ್ತು MOP ಯನ್ನು ಬಳಸಬಹುದಾಗಿದೆ. ಹಸಿರು ಎಲೆ ಕಾಂಪೋಸ್ಟ್ ಹಾಗೂ ಗದ್ದೆ ಗೊಬ್ಬರ ಕೂಡ ಉತ್ತಮ ಆಯ್ಕೆಗಳಾಗಿವೆ.
ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿ.ಎ.ಪಿಯನ್ನು ರೂಢಿಗತವಾಗಿ ಬಳಸುತ್ತಿದ್ದು, ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಅಂಶ ಮಾತ್ರವಿರುತ್ತದೆ. ಆದರೆ ಬೆಳೆಗಳಿಗೆ ಬರ ಮತ್ತು ರೋಗ ನಿರೋಧಕ ಶಕ್ತಿ ನೀಡಿ, ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿರುವ ಪೊಟ್ಯಾಷ್ ಲಭ್ಯವಿರುವುದಿಲ್ಲ. ಮಾರುಕಟ್ಟೆ ವಿವಿಧ ಶ್ರೇಣಿಯ ಸಾರಜನಕ, ರಂಜಕ ಮತ್ತು ಪೊಟ್ಯಾಷ್‍ಯುಕ್ತ ಬಹಳಷ್ಟು ರಸಗೊಬ್ಬರಗಳು (15:15:15, 16:16:16, 17:17:17, 19:19:19, 10:26:26, ಇತ್ಯಾದಿ) ಲಭ್ಯವಿದ್ದು, ಶಿಫಾರಸ್ಸಿನಂತೆ ವಿವಿಧ ರಸಗೊಬ್ಬರಗಳ ಸಂಯೋಜನೆಯೊಂದಿಗೆ ಬಳಸಬಹುದಾಗಿದೆ. ಶಿಫಾರಸ್ಸಿನಂತೆ ಬೆಳೆಗಳಿಗೆ ಸಾರಜನಕ: ರಂಜಕ: ಪೊಟ್ಯಾಷ್ ರಸಗೊಬ್ಬರಗಳನ್ನು 4:2:1 ಅನುಪಾತದಲ್ಲಿ ಬಳಸಬೇಕಾಗಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ರೈತರು ಬಳಸುತ್ತಿರುವ ರಸಗೊಬ್ಬರಗಳ ಅನುಪಾತವು ರಾಜ್ಯದಲ್ಲಿ 5:3:1 ಆಗಿರುತ್ತದೆ. ಇದನ್ನು ಸಮತೋಲನಾತ್ಮಕ ರಸಗೊಬ್ಬರಗಳ ಬಳಕೆಯನ್ನು ಉತ್ತೇಜಿಸಲು ಪೊಟ್ಯಾಷ್‍ಯುಕ್ತ ಸಂಯುಕ್ತ ರಸಗೊಬ್ಬರಗಳ ಬಳಕೆಯನ್ನು ಪ್ರೇರೇಪಿಸುವುದು ಮುಖ್ಯವಾಗಿರುತ್ತದೆ.
ಭತ್ತದ ಬೆಳೆಗೆ 24 ಕೆ.ಜಿ -ಸಾರಜನಕ, 12 ಕೆ.ಜಿ -ರಂಜಕ ಹಾಗೂ 30 ಕೆ.ಜಿ -ಪೊಟ್ಯಾಷ್‍ಯಂ ಪ್ರತಿ ಎಕರೆಗೆ ಬೇಕಾಗಿರುತ್ತದೆ. ಇದನ್ನು ಯೂರಿಯಾ- 17.5 ಕೆ.ಜಿ, ರಾಕ್ ಫಾಸ್ಫೇಟ್- 60 ಕೆ.ಜಿ ಹಾಗೂ ಪೊಟ್ಯಾಷ್‍ಯಂ- 16 ಕೆ.ಜಿಯನ್ನು ನಾಟಿಯ ಸಮಯದಲ್ಲಿ ನೀಡಬೇಕಾಗುತ್ತದೆ. ಮೇಲು ಗೊಬ್ಬರವಾಗಿ ನಾಟಿ ಮಾಡಿದ 25 ರಿಂದ 30 ದಿನಗಳಲ್ಲಿ ಯೂರಿಯಾ 17.5 ಕೆ.ಜಿ ಮತ್ತು ಪೊಟ್ಯಾಷ್‍ಯಂ- 16 ಕೆ.ಜಿಗಳನ್ನು ನೀಡಬೇಕಾಗುತ್ತದೆ. ನಾಟಿ ಮಾಡಿದ 55 ರಿಂದ 60 ದಿನಗಳಲ್ಲಿ (ಕಾಳು ಕಟ್ಟುವ ಹಂತದಲ್ಲಿ) ಯೂರಿಯಾ 17.5 ಕೆ.ಜಿ ಮತ್ತು ಪೊಟ್ಯಾಷ್‍ಯಂ- 16 ಕೆ.ಜಿಗಳನ್ನು ರಸಗೊಬ್ಬರದ ಮೂಲಕ ನೀಡಬೇಕಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles