ಮಂಗಳೂರು: ಶ್ರೀ ರಾಜರಾಜೇಶ್ವರಿ ಭಜನಾ ವೃಂದ ದುಬೈ ವತಿಯಿ೦ದ ಫೆ.22ರಂದು ದುಬೈಯಲ್ಲಿ “ವಿಂಶತಿ ಭಜನಾಟ್ಯ ಸಂಭ್ರಮ-2025“ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಮುಖ್ಯಸ್ಥರಾದ ರಾಜೇಶ್ ಕುತ್ತಾರ್ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ರಾಜರಾಜೇಶ್ವರಿ ಭಜನಾ ವೃಂದ ದುಬೈ ಕಳೆದ 20 ವರುಷಗಳಿಂದ ಕೊಲ್ಲಿ ರಾಷ್ಟ್ರ ಯುಎಇಯಲ್ಲಿ ಸಹಸ್ರಾರು ಮನೆಗಳ ಹಾಗೂ ಸಂಘ ಸಂಸ್ಥೆಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಾವುದೇ ರೀತಿಯ ಪ್ರತಿಫಲ ಆಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಭಜನಾ ಸೇವೆ ಮಾಡುತ್ತಾ ಬಂದಿದೆ. ಈ ನಿಸ್ವಾರ್ಥ ಭಜನಾ ಸಂಘಟನೆಗೆ ಈಗ ವಿಂಶತಿಯ ಸಂಭ್ರಮ. ಈ ಸಂಭ್ರಮವನ್ನು ಸಧ್ಯಕ್ತ ಬಾಂಧವರ ಜೊತೆ ಹಂಚಿಕೊಳ್ಳಲು, ನಮ್ಮ ಮುಂದಿನ ಪೀಳಿಗೆಗೆ ಭಜನಾ ಸಂಸ್ಕೃತಿಯನ್ನು ಪರಿಚಯಮಾಡಲು ವಿಶೇಷ ಕಾರ್ಯಕ್ರಮವನ್ನು ಫೆ.22ರಂದು ದುಬಾಯಿಯ ಅಲ ನಾಸರ್ ಲೀಸಲ್ಯಾಂ೯ಡ್ ಅನ್ನೋ ಬೃಹತ್ ಸಭಾಂಗಣದಲ್ಲಿ “ವಿಂಶತಿ ಭಜನಾಟ್ಯ ಸಂಭ್ರಮ-2025“ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದವರು ವಿವರಿಸಿದರು.
ಈ ಕಾರ್ಯಕ್ರಮದ ವಿಶೇಷತೆಯಾಗಿ ಕುಣಿತ ವಿಂಶತಿ, ಗಾನ ವಿಂಶತಿ, ನೃತ್ಯ ವಿಂಶತಿ, ಕುಣಿತ ವಿಂಶತಿ ಅನ್ನುವ ಭಕ್ತಿಪ್ರಧಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಯುಎಇ ಯಲ್ಲಿ ನಮ್ಮಂತೆ ಸೇವೆ ಮಾಡುವ ಹಲವಾರು ಉತ್ತಮ ಭಜನಾ ತಂಡಗಳಿವೆ, ಆ ತಂಡಗಳಲ್ಲಿ 8 ತಂಡಗಳನ್ನು ಆಯ್ದು ಪ್ರಪಥಮ ಬಾರಿಗೆ ಯುಎಇ ಮಟ್ಟದ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬಾಲ್ಯದಲ್ಲೇ ಭಕ್ತಿಗಾನದ ಮೂಲಕ ಜನಮನ್ನಣೆ ಗಳಿಸಿ ಪಂಚಭಾಷೆಗಳಲ್ಲಿ ಸಹಸ್ರಾರು ಭಕ್ತಿಗೀತೆಗಳನ್ನು ಹಾಡಿ ದೇಶವಿದೇಶಗಳಲ್ಲಿ ಕೂಡ ತನ್ನ ಅಪಾರ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರುವ ಕೇರಳದ ಪ್ರಖ್ಯಾತ ಯುವ ಗಾಯಕಿ ಕು.ಸೂರ್ಯ ಗಾಯತ್ರಿಯವರಿಂದ ಭಕ್ತಿ ಗಾಯನ, ಯುಎಇ ಯಲ್ಲಿ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿರುವ ಖ್ಯಾತ ನೃತ್ಯ ವಿಧುಷಿ ರೂಪ ಕಿರಣ್ ಬಳಗದವರಿಂದ ಕರ್ನಾಟಕದ ಪುಣ್ಯ ಸ್ಥಳಗಳ ಕಾರಣಿಕ ದೇವತೆಗಳ ಪೌರಾಣಿಕ ನೃತ್ಯ ರೂಪಕವನ್ನು ಬೆಳಕು, ದೃಶ್ಯ ಸಂಯೋಜನೆಯ ಮೂಲಕ ಸಾದರಪಡಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಸುವರ್ಣ ಸತೀಶ್ ಪೂಜಾರಿ ಉಪಸ್ಥಿತರಿದ್ದರು.
