ಮಂಗಳೂರು: ಸಂಸದ ಕ್ಯಾ. ಬ್ರಿಜೇಶ್ ಚೌಟ ಕಚೇರಿ ಹಾಗೂ ಸುಂದರ ಭಾರತ ಟ್ರಸ್ಟ್ ಇದರ ಸಂಯುಕ್ತ ಆಶ್ರಯದಲ್ಲಿ ಯುವಜನರಿಗೆ ಉದ್ಯೋಗ- ಉದ್ದಿಮೆಯ ಅವಕಾಶ-ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡುವ “ಯುವ್ವಿಕಾಸ ” ಎಂಬ ಯುವ ಸಬಲೀಕರಣ ಕಾರ್ಯಕ್ರಮ ಜೂ. 16 ರಂದು ಸುಳ್ಯದ ತಾಲೂಕು ಪಂಚಾಯತ್ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಯುವಜನರಿಗೆ, ವಿದ್ಯಾರ್ಥಿಗಳಿಗೆ ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಅವಕಾಶಗಳು, ಹೊಸ ಉದ್ದಿಮೆ, ಸ್ಟಾರ್ಟಪ್ , ಪ್ರಾರಂಭಿಸುವುದು, ಎಐ ಯುಗದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಉದ್ಯೋಗಗಳು, ಇಂಜಿನಿಯರಿಂಗ್ ಕಲಿಯದವರಿಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವ ವಿಪುಲ ಅವಕಾಶಗಳು ಇತ್ಯಾದಿ ವಿಚಾರಗಳ ಕುರಿತು ಸಮಗ್ರ ಮಾಹಿತಿಯನ್ನು ಒದಗಿಸಲಾಗುವುದು. ಜೊತೆಗೆ ಯುವಜನತೆಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಲು ವಿವಿಧ ಕ್ಷೇತ್ರಗಳ ವಿಷಯ ಪರಿಣತ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಉದ್ಘಾಟಿಸಲಿದ್ದು, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಗಾಗಿ ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾಗಿ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಮುಂತಾದವರು ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಐಟಿ ಕ್ಷೇತ್ರದ ಪರಿಣತರಾಗಿರುವ ಮಹಂತೇಶ್ ಕಟಗೇರಿ, ಬಿಪಿಓ ಕ್ಷೇತ್ರದ ಕುರಿತು ಪ್ರಸನ್ನ ಕೃಷ್ಣಯ್ಯ, ಶೈಕ್ಷಣಿಕ ಕ್ಷೇತ್ರದ ಬಗ್ಗೆ ಹರೀಶ್ ಕುಮಾರ್, ಎಐ ಉದ್ಯೋಗಕಾಶಗಳ ಭಾರತೀಯ ಆಡಳಿತ ಫೆಲೋ ಹಾಗೂ ಸುಂದರ ಭಾರತ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಪ್ರತಾಪ್ ಕೆ. ಪರಾಶರ್ ಮಾಹಿತಿ ನೀಡಲಿದ್ದಾರೆ.
ಕಾರ್ಯಕ್ರಮದ ಆಯೋಜನೆ ಕುರಿತು ಮಾತನಾಡಿರುವ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, “ನಮ್ಮ ಯುವಜನತೆಯಲ್ಲಿ ಅಪಾರ ಪ್ರತಿಭೆ ಮತ್ತು ಸಾಮರ್ಥ್ಯವಿದೆ. ಆದರೆ, ಅನೇಕ ಬಾರಿ ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನದ ಕೊರತೆಯಿಂದ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ‘ಯುವ್ವಿಕಾಸ’ ಕಾರ್ಯಕ್ರಮವು ಅವರಿಗೆ ಲಭ್ಯವಿರುವ ಅವಕಾಶಗಳನ್ನು ಪರಿಚಯಿಸಿ, ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಪ್ರೇರಣೆ ನೀಡುವ ಗುರಿ ಹೊಂದಿದೆ. ಕೌಶಲ್ಯಾಭಿವೃದ್ಧಿಯ ಮೂಲಕ ಉದ್ಯೋಗ ಮತ್ತು ಉದ್ದಿಮೆಗಳಲ್ಲಿ ಯುವಜನರು ಯಶಸ್ಸು ಸಾಧಿಸಬೇಕು ಎನ್ನುವುದು ನಮ್ಮ ಆಶಯ. ಈ ಹಿನ್ನಲೆಯಲ್ಲಿ ಯುವಸಮುದಾಯಕ್ಕೆ ಈ ‘ಯುವ್ವಿಕಾಸ ‘ ಕಾರ್ಯಕ್ರಮ ಉಪಯುಕ್ತವಾಗಲಿದೆ ” ಎಂದು ತಿಳಿಸಿದ್ದಾರೆ.
