ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 35ನೇ ಪದವು ಸೆಂಟ್ರಲ್ ವಾರ್ಡಿನ ನೀತಿನಗರ, ಮಯೂರ ಗೇಮ್ಸ್, ಕಾರ್ಮಿಕ ಕಾಲೋನಿಯಲ್ಲಿ 49.50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೂರು ಅಂಗನವಾಡಿ ಕೇಂದ್ರಗಳ ಶಂಕುಸ್ಥಾಪನೆಯನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು, ಇಲ್ಲಿನ ಪುಟ್ಟ ಮಕ್ಕಳಿಗೆ ಅತೀ ಅಗತ್ಯವಾಗಿ ಬೇಕಿರುವ ಅಂಗನವಾಡಿ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯ ಕಿಶೋರ್ ಕೊಟ್ಟಾರಿಯವರು ನಿರಂತರವಾಗಿ ನನ್ನ ಗಮನಕ್ಕೆ ತಂದಿದ್ದು ಅದರಂತೆ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ 6 ಅಂಗನವಾಡಿ ಕೇಂದ್ರಗಳಿಗೆ ಒಂದು ಕೋಟಿ ವಿಶೇಷ ಅನುದಾನವನ್ನು ಮಂಜೂರುಗೊಳಿಸಲಾಗಿತ್ತು. ಆದರೆ ಚುನಾವಣೆ ನೀತಿ ಸಂಹಿತೆ ಹಾಗೂ ಸರ್ಕಾರ ಬದಲಾದ ನಂತರ ಎಲ್ಲ ಯೋಜನೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದವು. ಇದೀಗ ಹಿಂದಿನ ಸರ್ಕಾರದಲ್ಲಿ ಮಂಜೂರಾಗಿದ್ದ ಯೋಜನೆಗಳಿಗೆ ಮತ್ತೆ ಚಾಲನೆ ಸಿಕ್ಕಿದ್ದು ಒಂದು ಕೋಟಿಯಲ್ಲಿ 49.50 ಲಕ್ಷದ 3 ಅಂಗನವಾಡಿಗಳು ಈ ವಾರ್ಡಿನಲ್ಲೇ ನಿರ್ಮಾಣಗೊಳ್ಳುತ್ತಿರುವುದು ವಿಶೇಷ.
ಈ ಅಂಗನವಾಡಿ ನಿರ್ಮಾಣ ಕಾರ್ಯದಲ್ಲಿ ಅಧಿಕಾರಿ ವರ್ಗದವರು ಸಹ ಅತ್ಯಂತ ಕಾಳಜಿಯಿಂದ ಸಹಕರಿಸಿದ್ದು ಅವರಿಗೂ ವಿಶೇಷ ಅಭಿನಂದನೆಗಳು. ಶೀಘ್ರದಲ್ಲಿ ಇದರ ಕಾಮಗಾರಿ ಮುಗಿದು ಪುಟಾಣಿಗಳು ಇಲ್ಲಿ ಒಳ್ಳೆಯ ಸಂಸ್ಕಾರಗಳನ್ನು ಕಲಿತು ಭವಿಷ್ಯದಲ್ಲಿ ದೇಶಕ್ಕೆ ಉತ್ತಮ ಪ್ರಜೆಯಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮ.ನ.ಪಾ ಸದಸ್ಯ ಗಣೇಶ್ ಕುಲಾಲ್, ನಿತಿನ್ ಕುಮಾರ್, ರೀತೇಶ್, ದೇವಿಪ್ರಸಾದ್, ಮಾಧವ್ ಭಟ್, ಮಣಿ, ಸದಾನಂದ ಕಕ್ಕೆಬೆಟ್ಟು, ಭಾಸ್ಕರ್ ಕಕ್ಕೆಬೆಟ್ಟು, ತೇಜಸ್, ನೇತ್ರಾವತಿ, ಮುನ್ನ, ಹೆನ್ರಿ, ಸುನಿಲ್, ರಮೇಶ್, ವಸಂತ್, ದಿನಕರ್ ಮುಂತಾದವರು ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
