ಮ೦ಗಳೂರು: ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ದಕ್ಷಿಣ ವಲಯದ ಮುಂದಾಳತ್ವದಲ್ಲಿ ಮಂಗಳೂರು ದಕ್ಷಿಣ ವಲಯದ ಎಲ್ಲಾ ಚರ್ಚಿನ ಧರ್ಮಗುರುಗಳು, ಧರ್ಮಭಗಿನಿಯರು, ಪಾಲನಾ ಮಂಡಳಿಗಳು, ವಿವಿಧ ಸಂಘ ಸಂಸ್ಥೆಗಳು, ಕಥೊಲಿಕ್ ವಿದ್ಯಾಸಂಸ್ಥೆಗಳು ಹಾಗೂ 21 ಆಯೋಗದ ಸಹಭಾಗಿತ್ವದಲ್ಲಿ ತಪಸ್ಸು ಕಾಲದ ಆಧ್ಯಾತ್ಮಿಕ ಪ್ರೇರಣೆಯಾಗಿ ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರ, ಮುಡಿಪು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಮಹಾನ್ ಕಾಲ್ನಡಿಗೆ ಜಾಥ “ನಮ್ಮ ನಡಿಗೆ ಮುಡಿಪು ಪುಣ್ಯ ಕ್ಷೇತ್ರದ ಕಡೆಗೆ” ಮಾರ್ಚ್ 16 ರ೦ದು ನಡೆಯಲಿರುವುದು ಎ೦ದು ಸಂಚಾಲಕ ಆಲ್ವಿನ್ ಡಿಸೋಜಾ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೋಟೆಕಾರು ಗ್ರಾಮದ ಪಾನೀರ್ನ ದಯಾಮಾತಾ ದೇವಾಲಯದಲ್ಲಿ ವಿಶ್ರಾಂತ ಬಿಷಪ್ ಅತೀ ವಂದನೀಯ ಡಾ। ಅಲೋಶಿಯಸ್ ಪೌಲ್ ಡಿಸೋಜಾ ಅವರಿಂದ ಆಶೀರ್ವಚನ ಹಾಗೂ ವಂದನೀಯ ಫಾ। ವಿಕ್ಟರ್ ಡಿಮೆಲ್ಲೊ ಅವರಿ೦ದ ಉದ್ಘಾಟನೆ ನೆರವೇರಲಿದೆ. . ಸಮಾರೋಪ ಕಾರ್ಯಕ್ರಮದಲ್ಲಿ ಅತೀ ವಂದನೀಯ ಫಾ| ಆಸ್ಸಿಸಿ ರೆಬೆಲ್ಲೊ ರವರು ಮತ್ತು ಫಾ| ಸಂತೋಷ್ ಮಿನೇಜಸ್‘ರವರು ಪ್ರಾರ್ಥನೆಯನ್ನು ನೆರವೇರಿಸುವರು. ಅತೀ ವಂದನೀಯ ಫಾ। ಸಿಪ್ರಿಯನ್ ಪಿಂಟೊರವರು ಪರಮಪ್ರಸಾದದ ಆಶೀರ್ವಚನವನ್ನು ನೆರವೇರಿಸುವರು.
ಈ ಕಾರ್ಯಕ್ರಮವು ಆಧ್ಯಾತ್ಮಿಕ ಕಾರ್ಯಕ್ರಮವಾಗಿದ್ದು ಯೇಸುಕ್ರಿಸ್ತರು ಹುಟ್ಟಿ 2025 ವರ್ಷಗಳು(ಮಹೋತ್ಸವ) ತುಂಬಿದ ಸಂದರ್ಭದಲ್ಲಿ ಹಾಗೂ ತಪಸ್ಸು ಕಾಲದ ಪರಿವರ್ತನಾ ಜಾಥಾವಾಗಿರುತ್ತದೆ. ಈ ಜಾಥಕ್ಕೆ ಸುಮಾರು 5000 ಜನರು ಸೇರಲಿದ್ದಾರೆ. ಈ ಜಾಥವು ಪಾನೀರ್ ದಯಾಮಾತಾ ದೇವಾಲಯದಿಂದ ಹೊರಟು, ದೇರಳಕಟ್ಟೆಯಿಂದ ಸಾಗಿ ನಾಟೇಕಲ್ ಮಾರ್ಗವಾಗಿ ಮುನ್ನಡೆದು ಮುಡಿಪು ಸಂತ ಜೋಸೆಫ್ ವಾಜ್’ರವರ ಪುಣ್ಯಕ್ಷೇತ್ರದಲ್ಲಿ ಕೊನೆಗೊಳ್ಳುವುದು ಎ೦ದವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ದಕ್ಷಿಣ ವಲಯದ ಕಥೊಲಿಕ್ ಸಭಾದ ಅಧ್ಯಕ್ಷ ಡೊಲ್ಫಿ ಡಿಸೋಜಾ, ಪಾನೀರ್ಘಟಕದ ಅಧ್ಯಕ್ಷ ರಜತ್ ವೇಗಸ್, ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದ ಬೆಳ್ಳಿ ಹಬ್ಬದ ಸಂಚಾಲಕ ರೋಶನ್ ಡಿಸೋಜಾ, ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದ ಉಪಾಧ್ಯಕ್ಷ ನವೀನ್ ಡಿಸೋಜಾ ಮತ್ತು ಕಾರ್ಯದರ್ಶಿ ಸಂತೋಶ್ ಡಿಸೋಜಾ ಹಾಗೂ ಕಥೊಲಿಕ್ ಸಭಾ ಮಂಗುರ್ ಪ್ರದೇಶ್(ರಿ) ದಕ್ಷಿಣ ವಲಯದ ಉಪಾಧ್ಯಕ್ಷಅರುಣ್ ಡಿಸೋಜಾ ಅವರು ಉಪಸ್ಥಿತರಿದ್ದರು.
