ಮಂಗಳೂರು: ಸಂಯಮ, ಏಕಾಗ್ರತೆ ಹಾಗೂ ಸತತ ಪ್ರಯತ್ನದಿಂದ ಸಾಧನೆಯ ಹಾದಿ ಸುಗಮವಾಗುತ್ತದೆ. ಮಕ್ಕಳು ಕಲಿಕೆಯ ಜತೆಗೆ ಈ ನೆಲೆಯಿಂದ ವಿಶೇಷವಾಗಿ ಗಮನಹರಿಸಬೇಕು. ಆ ಮೂಲಕ ಬದುಕಿಗೆ ಹೊಸ ಸ್ಪೂರ್ತಿ ದೊರೆಯಲಿದೆ ಎಂದು ಓಝಸ್ ಸಂಸ್ಥೆಯ ಮುಖ್ಯಸ್ಥೆ ಮಂಗಳ ನಂದಕುಮಾರ್ ಆಶಿಸಿದರು.
ಮಂಗಳೂರಿನ ಓಝಸ್ ಸಂಸ್ಥೆಯ ವತಿಯಿಂದ ಆನಂದಾಶ್ರಮ ಪ್ರೌಢಶಾಲೆಗೆ ಪಡೆಸ್ಟಿಯಲ್ ಫ್ಯಾನ್ ಪ್ರದಾನಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ವಿವಿಧ ಸಂಘ ಸಂಸ್ಥೆಗಳು ನೆರವಾಗುವ ಮೂಲಕ ಅವರ ಭವಿಷ್ಯಕ್ಕೆ ದಾರಿದೀಪವಾಗಬೇಕಿದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯರಾದ ಗುರುಮೂರ್ತಿ ಅವರು ಮಾತನಾಡಿ, ಮಕ್ಕಳು ಶಿಕ್ಷಣದಲ್ಲಿ ತೊಡಗಿಸಿಕೊಳ್ಳುವ ಜತೆಗೆ ಇತರ ಚಟುವಟಿಕೆಗಳ ಬಗ್ಗೆಯೂ ಆಸಕ್ತಿ ವಹಿಸುವುದು ಅಗತ್ಯ ಎಂದರು.
ಓಝಸ್ ಸಂಸ್ಥೆಯ ಗೌರವಾಧ್ಯಕ್ಷ ನಂದಕುಮಾರ್ ಅವರು ಪೆಡೆಸ್ಟೀಯಲ್ ಫ್ಯಾನ್ ಅನ್ನು ಶಾಲೆಯ ಮುಖ್ಯೋಪಧ್ಯಾಯರಿಗೆ ಹಸ್ತಾಂತರಿಸಿದರು.
ಪ್ರಾಧ್ಯಾಪಕ ಗಣೇಶ ನಿರೂಪಿಸಿದರು. ಶಿಕ್ಷಕರಾದ ಪ್ರದೀಪ್ ಕುಮಾರ್ ಬೇಕಲ್, ಉಷಾ ಟೀಚರ್ ಮುಂತಾದವರು ಉಪಸ್ಥಿತರಿದ್ದರು.


