ಮ೦ಗಳೂರು: ಕುಟು೦ಬದೊ೦ದಿಗೆ ಸಂಪರ್ಕ ಕಳೆದುಕೊಂಡು ಸ೦ಕಷ್ಟದಲ್ಲಿದ್ದ ಮಾನಸಿಕ ಅಸ್ವಸ್ಥ ತಾಯಿ ಮತ್ತು ಆಕೆಯ ಎಂಟು ತಿಂಗಳಿನ ಮಗುವನ್ನು ಸ್ನೇಹಾಲಯದ ರಕ್ಷಣಾ ತಂಡವು ರಕ್ಷಿಸಿ ಅವರಿಗೆ ಚಿಕಿತ್ಸೆ ನೀಡಿ ಮತ್ತೆ ಕುಟು೦ಬದಿ೦ದೊ೦ದಿಗೆ ಸೇರಿಸಿದೆ.

25ರ ಮಾರ್ಚ್ 22 ರ೦ದು ಪೋಲಿಸರಿಂದ ದೊರಕಿದ ಮಾಹಿತಿಯ ಮೇರೆಗೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಸ್ನೇಹಾಲಯದ ರಕ್ಷಣಾ ತಂಡವು ಪೂಜಾ ಮತ್ತು ಆಕೆಯ ಎಂಟು ತಿಂಗಳಿನ ಮಗು ಆಯುಷನನ್ನು ರಕ್ಷಿಸಿ ತಾಯಿ–ಮಗುವನ್ನು ಮಂಜೇಶ್ವರದ ಸ್ನೇಹಾಲಯ ಮನೋ ಸಾಮಾಜಿಕ ಪುನಶ್ಚೇತನ ಸಂಸ್ಥೆಯ ಮಹಿಳೆಯರ ವಿಭಾಗದಲ್ಲಿ ದಾಖಲಿಸಿದರು. ದೊರೆತ ಮಾಹಿತಿಯ ಪ್ರಕಾರ ಪೂಜಾ ಓರ್ವ ಗೃಹಿಣಿಯಾಗಿದ್ದು, ಮಾನಸಿಕ ಅಸ್ವಸ್ಥತೆಯ ಕಾರಣದಿಂದ ಬಿಹಾರವನ್ನು ಬಿಟ್ಟು ಉದ್ಯೋಗಕ್ಕಾಗಿ ತಮಿಳುನಾಡಿಗೆ ಹೊರಟಿದ್ದರು. ಆದರೆ ದುರಾದೃಷ್ಟದಿಂದ ತಮ್ಮ ಕುಟುಂಬದೊಡನೆ ಸಂಪರ್ಕ ಕಳೆದುಕೊಂಡರು ಅವರಿಂದ ಬೇರ್ಪಟ್ಟರು.
ಆದರೆ ಸ್ನೇಹಾಲಯದಲ್ಲಿ ಆವಳ ಜೀವನಕ್ಕೆ ಒಂದು ಹೊಸ ತಿರುವು ಬಂತು. ಸ್ನೇಹಾಲಯದಲ್ಲಿ ದೊರೆತ ಸಮಗ್ರ ಮಾನಸಿಕ ಶಾರೀರಿಕ ಚಿಕಿತ್ಸೆ, ಅತ್ತ್ಯುತ್ತಮ ಆರೈಕೆ ಮತ್ತು ಸಮಾಲೋಚನೆಗಳಿಂದ ಆಕೆಯು ತನ್ನ ಮಾನಸಿಕ ಆರೋಗ್ಯವನ್ನು ಪುನ ಪಡೆದುಕೊಂಡಳು.ತದನಂತರ ಅವರ ಪುನರ್ಮಿಲನ ಪ್ರಕ್ರಿಯೆ ಪ್ರಾರಂಭವಾಯಿತು. ಶ್ರದ್ದಾ ಫೌಂಡೇಶನಿನ ಬಸವರಾಜ್ ಅವರ ನೇತೃತ್ವದಲ್ಲಿ ಪೂಜಾಳ ವಿಳಾಸವನ್ನು ಪತ್ತೆ ಹಚ್ಚುವ ಕಾರ್ಯ ನಡೆಯಿತು ಹಾಗೂ ದೂರದ ಬಿಹಾರದಲ್ಲಿ ವಾಸಿಸುತ್ತಿರುವ ಆಕೆಯ ಗಂಡ ಮತ್ತು ಪರಿವಾರವನ್ನು ಪತ್ತೆ ಹಚ್ಚಲಾಯಿತು.
ಸೆಪ್ಟಂಬರ್ 7 ರಂದು ಪೂಜಾಳ ಗಂಡ ಭೂಪಾಲಿ ಆಕೆಯನ್ನು ಕರೆದುಕೊಂಡು ಹೋಗಲು ಸ್ನೇಹಾಲಯಕ್ಕೆ ಆಗಮಿಸಿದರು. ಈ ದಿನ ಪೂಜಾಳ ಬಾಳಿನಲ್ಲಿ ಅತ್ಯಂತ ಸಂತೋಷದ ದಿನವಾಗಿದ್ದರೂ ಸ್ನೇಹಾಲಯದ ಸಿಬ್ಬಂದಿಗಳಿಗೆ ಕಣ್ಣಿನಲ್ಲಿ ನೀರು ತರಿಸುವಂತ ದಿನವಾಗಿತ್ತು. ಕಾರಣ ಆಯುಷ್ ತನ್ನ ನಿಷ್ಕಳಂಕ ನಗು ಮತ್ತು ತುಂಟತನದಿಂದ ಸ್ನೇಹಾಲಯದ ಸಿಬ್ಬಂದಿಗಳ ಹೃದಯವನ್ನು ಸೂರೆ ಮಾಡಿ ಎಲ್ಲರ ಕಣ್ಮಣಿಯಾಗಿದ್ದ.. ಅವನ ತುಂಟ ನೋಟ, ಮತ್ತು ನಗು ಪ್ರತಿಯೊಂದು ದಿನವನ್ನೂ ಹರ್ಷದಾಯಕವನ್ನಾಗಿಮಾಡಿದವು. ಅಲ್ಲದೆ ಸ್ನೇಹಾಲಯದ ಪ್ರತಿಯೊಂದು ಸಿಬ್ಬಂದಿಗಳಿಂದ ಅವನಿಗೆ ತಂದೆ ತಾಯಿಯ ಪ್ರೀತಿ, ಮಮತೆ, ಕರುಣೆ ಮತ್ತು ಒಲವು ದೊರಕುತ್ತಿತ್ತು.


