ಬೆ೦ಗಳೂರು: ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯವು ಧರ್ಮ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರ (CRC)ವನ್ನು ಉದ್ಘಾಟಿಸಿದೆ. ಕ್ರಿಶ್ಚಿಯನ್ ಮಿಷನರಿಗಳು, ಪಂಡಿತರು ಮತ್ತು ಸಂಸ್ಥೆಗಳು ಕರ್ನಾಟಕ ಮತ್ತು ಭಾರತದ ಇತಿಹಾಸ, ಸಂಸ್ಕೃತಿ ಮತ್ತು ಬೌದ್ಧಿಕ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಗಳನ್ನು ಸಂಗ್ರಹಿಸುವುದು, ಸಂರಕ್ಷಿಸುವುದು ಮತ್ತು ವಿಮರ್ಶಾತ್ಮಕವಾಗಿ ಅಧ್ಯಯನಿಸುವುದು ಈ ಕೇಂದ್ರದ ಮುಖ್ಯ ಉದ್ದೇಶ.
ಉದ್ಘಾಟನಾ ಸಮಾರಂಭದಲ್ಲಿ ಅರ್ಚ್ಬಿಷಪ್ ಪೀಟರ್ ಮಚಾದೊ, ಪ್ರೊ. ಎಸ್. ಜಫೇತ್, ಪ್ರಾಂತ್ಯಾಧಿಕಾರಿ ರೆ. ಡಯೊನಿಷಿಯಸ್ ವಾಜ್, ಕುಲಪತಿ ಫಾ. ವಿಕ್ಟರ್ ಲೋಬೊ, ಫಾ. ಮೆಲ್ವಿನ್ ಪಿಂಟೊ, ಡಾ. (ಸಿ) ದೀಪ್ತಿ, ಇತಿಹಾಸಕಾರ ಅಲನ್ ಮಚಾದೊ ಪ್ರಭು ಹಾಗೂ CRC ನಿರ್ದೇಶಕ ಡಾ. ರೆ. ಬಾಲ ಕಿರಣ ಕುಮಾರ್ ಹೃದಯರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಡಾ. ಬಾಲ ಕಿರಣ ಅವರು CRCಯ ಉದ್ದೇಶ ಮತ್ತು ಕಾರ್ಯಯೋಜನೆಗಳನ್ನು ವಿವರಿಸಿ ಸ್ವಾಗತಿಸಿದರು.
ಅರ್ಚ್ಬಿಷಪ್ ಪೀಟರ್ ಮಚಾದೊ ಅವರು CRC ಕ್ರಿಶ್ಚಿಯನ್ ಪರಂಪರೆಯ ಸಂಗ್ರಹಾಗಾರವಾಗುವುದರ ಜೊತೆಗೆ ಸಂವಾದ ಮತ್ತು ಸಮರಸತೆಯ ವೇದಿಕೆಯಾಗಿ ಬೆಳೆಯಬೇಕು. ಇದು ಕೇವಲ ಸಂಶೋಧನಾ ಕೇಂದ್ರವಲ್ಲ, ಜೀವನ ಮತ್ತು ಅಧ್ಯಯನ ಒಂದೇ ಜಾಗದಲ್ಲಿ ಸೇರಿಸುವ ಬದುಕಿನ ತರಗತಿಯಾಗಿದೆ ಎಂದರು. ಪ್ರೊ. ಜಫೇತ್ ಅವರು ಭಾರತದ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಕ್ರಿಶ್ಚಿಯನ್ ಸಮುದಾಯಗಳ ಮೂಲಭೂತ ಪಾತ್ರವನ್ನು ನೆನಪಿಸಲು CRC ಅಗತ್ಯವಾಗಿದೆ ಎಂದರು.
ಕುಲಪತಿ ರೆ. ವಿಕ್ಟರ್ ಲೋಬೊ ಅವರು CRCಯಿಂದ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ಆರಂಭವಾಗುವುದಾಗಿ ಹೇಳಿದರು. ಜ್ಞಾನ ಭಯವನ್ನು ನಿವಾರಿಸುತ್ತದೆ, ಸಂವಾದ ಶಾಂತಿಯನ್ನು ಬಲಪಡಿಸುತ್ತದೆ, ಪರಂಪರೆ ಹೊಣೆಗಾರಿಕೆಯನ್ನು ಕೇಳುತ್ತದೆ ಎಂಬ ಮೂರು ತತ್ವಗಳನ್ನು ಅವರು ಒತ್ತಿ ಹೇಳಿದರು.


