24.5 C
Karnataka
Thursday, April 30, 2026

ಮಂಗಳೂರು ನಗರ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಸಮಾರಂಭ

ಮ೦ಗಳೂರು: 2026 ನೇ ಸಾಲಿನ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಅಂಗವಾಗಿ, ಮಂಗಳೂರು ನಗರದ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಸಮಾರಂಭ ನಗರದ ಪುರಭವನದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಬಸ್ಸು, ಆಟೋ ಸಂಘದ ಪದಾಧಿಕಾರಿಗಳು, ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಜೆಪ್ಪಿನಮೊಗೆರು ಯೆನೆಪೋಯಾ ಸ್ಕೂಲ್ ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಬಗ್ಗೆ ಬೀದಿನಾಟಕ ಪ್ರದರ್ಶನ ನೀಡಿದರು. ಮಂಗಳೂರು ನಗರದಲ್ಲಿ ನಡೆದಂತಹ ಕೆಲವು ಅಪಘಾತಗಳ ಲೈವ್ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಪ್ರದರ್ಶಿಸಿ ಪ್ರೇಕ್ಷಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಮನವರಿಕೆ ಮಾಡಲಾಯಿತು.

ಮಂಗಳೂರು ನಗರದ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ , ನಗರದಲ್ಲಿ ಯಾವುದೇ ವಾಹನ ಚಾಲಕ ಅಥವಾ ಸವಾರನು ಮದ್ಯ ಪಾನ ಮಾಡಿ ವಾಹನವನ್ನು ಚಲಾಯಿಸಿ ಅಪಘಾತದಿಂದ ಸಾವು ಉಂಟು ಮಾಡಿದರೆ, ಅಂತಹ ಚಾಲಕ/ಸವಾರನ ವಿರುದ್ಧ ಅಪರಾಧಿಕ ಮಾನವ ಹತ್ಯೆ (Culpable Homicide – ಕಲಂ 105 ಬಿ.ಎನ್.ಎಸ್ ಪ್ರಕಾರ 10 ವರ್ಷದ ವರೆಗೆ ಸಜೆ) ಯಂತೆ ಪ್ರಕರಣವನ್ನು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು,
ಸಾಮಾನ್ಯವಾಗಿ ಒಂದು ಕುಟುಂಬವು ಒಬ್ಬ ವ್ಯಕ್ತಿಯ ದುಡಿಮೆಯನ್ನೇ ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿರುತ್ತದೆ. ಆ ಕುಟುಂಬದ ಆಧಾರಸ್ತಂಭವಾಗಿರುವ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟರೆ, ಆತನ ಮೇಲೆ ಅವಲಂಬಿತವಾಗಿರುವ ಇಡೀ ಕುಟುಂಬವು ಅಪಾರವಾದ ಮಾನಸಿಕ, ಆರ್ಥಿಕ ಹಾಗೂ ಸಾಮಾಜಿಕ ವ್ಯಥೆಯನ್ನು ಅನುಭವಿಸಿ ಸಂಪೂರ್ಣವಾಗಿ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಪಾದಚಾರಿಗಳ ಸುರಕ್ಷತೆಗಾಗಿ ಹೆದ್ದಾರಿಯಲ್ಲಿ ಹಾಗೂ ಕೆಲವು ಪ್ರಮುಖ ರಸ್ತೆಗಳಲ್ಲಿ ಸೆಂಟರ್ ಮಿಡಿಯನ್‌ಯನ್ನು ಆಳವಡಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿದೆ ಎಂದು ಅವರು ತಿಳಿಸಿದರು.

ವಿಶೇಷ ಆಹ್ವಾನಿತರಾಗಿ ನ್ಯಾಯಾಧೀಶರಾದ ಶ್ರೀಮತಿ ಜೈಬುನಿಸ್ಸಾ, , ಚಲನಚಿತ್ರ ನಟ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್, ಮುಖ್ಯ ಅತಿಥಿಗಳಾಗಿ ಡಾ. ಅರ್ಜುನ್ ಶೆಟ್ಟಿ (ಪ್ರೋ & ಹೆಡ್, ನ್ಯೂರೋಸರ್ಜರಿ, ಕೆ.ಎಂ.ಸಿ) ಹಾಗೂ ಇತರ ಗಣ್ಯರು ಭಾಗವಹಿಸಿದ್ದರು., ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಪಾಲನೆ ಮತ್ತು ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿ ತಿಳುವಳಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ನಗರದ ಸಂಚಾರ ಸುವ್ಯವಸ್ಥೆಗೆ ಶ್ಲಾಘನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಲಾಯಿತು ಹಾಗೂ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಂಚಾರಿ ವಿಷಯಗಳ ಬಗ್ಗೆ ರಸಪ್ರಶ್ನೆ ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅತೀ ಹೆಚ್ಚು ಅಪಘಾತ ನಡೆಯುತ್ತಿರುವ ಒಟ್ಟು 16 ಸ್ಥಳಗಳನ್ನು ಬ್ಲಾಕ್ ಸ್ಪಾಟ್‌ಗಳಾಗಿ ಗುರುತಿಸಿದ್ದು, ಈ ಸ್ಥಳಗಳಲ್ಲಿ ಒಟ್ಟು 315 ಅಪಘಾತಗಳು ನಡೆದಿದ್ದು, 77 ಜನರು ಸಾವನ್ನಪ್ಪಿರುತ್ತಾರೆ ಮತ್ತು ಸಾಕಷ್ಟು ಜನ ಗಾಯಗೊಂಡಿರುತ್ತಾರೆ. ಸದ್ರಿ ಸ್ಥಳದಲ್ಲಿ ಅಪಘಾತವನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಗರ ಹಾಗೂ ನಗರದ ಸುತ್ತಲಿನ ರಸ್ತೆಗಳಲ್ಲಿ 28 ಸ್ಥಳಗಳಲ್ಲಿ ಒಟ್ಟು 169 ಎಐ ಕ್ಯಾಮೆರಗಳನ್ನು ಅಳವಡಿಸಿದ್ದು, ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಚಾಲಕ/ಸವಾರರ ಮೇಲೆ ಸೂಕ್ತ ನಿಗಾ ಇರಿಸಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.

ವಾಹನದಿಂದ ಮೊತ್ತದ ದಂಡದ ಮೂಲಕ ಪ್ರಕರಣಗಳು
ವರ್ಷ – 2023
ವಾಹನದಿಂದ ಒಟ್ಟು ಪ್ರಕರಣಗಳು – 1,36,493
ದಂಡದ ಮೊತ್ತ – ₹5,41,88,300/-

ವರ್ಷ – 2024
ವಾಹನದಿಂದ ಒಟ್ಟು ಪ್ರಕರಣಗಳು – 1,44,859
ದಂಡದ ಮೊತ್ತ – ₹6,65,76,800/-

ವರ್ಷ – 2025
ವಾಹನದಿಂದ ಒಟ್ಟು ಪ್ರಕರಣಗಳು – 2,43,548
ದಂಡದ ಮೊತ್ತ – ₹9,49,07,450/-

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles