ಮ೦ಗಳೂರು: ಮುಲ್ಕಿ ಬಳಿ 2020ರಲ್ಲಿ ಹಾಡುಹಗಲಿನಲ್ಲಿ ನಡೆದ ಹತ್ಯ ಪ್ರಕರಣದಲ್ಲಿ ಸುಮಾರು ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬ೦ಧಿಸಿದ್ದಾರೆ. ಮೊಹಮ್ಮದ್ ಮುಸ್ತಫಾ ಬ೦ಧಿತ ಆರೋಪಿ.
ದಿನಾಂಕ ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಮುಲ್ಕಿ ವಿಜಯ ಸನ್ನಿದಿ ಹೆದ್ದಾರಿ ಬಳಿ ರಸ್ತೆಯಲ್ಲಿ 5-06-2020 ರಂದು ಹಾಡುಹಗಲಿನಲ್ಲಿ ಅಬ್ದುಲ್ ಲತೀಫ್ ಎಂಬವರನ್ನು ಆರೋಪಿಗಳಾದ ದಾವೂದ್ ಹಕೀಂ, ಮೊಹಮ್ಮದ್ ಮುಸ್ತಾಫ ಮತ್ತು ಇತರರು ಒಟ್ಟು 10 ಜನ ಸೇರಿ ಕೊಲೆ ಮಾಡಿದ್ದು, ಎಲ್ಲಾ ಆರೋಪಿಗಳ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು ಹಾಲಿ ನ್ಯಾಯಾಲಯದ ವಿಚಾರಣಾ ಹಂತದಲ್ಲಿರುತ್ತದೆ.
ಪಕ್ಷಿಕೆರೆ, ಕೆಮ್ರಾಲ್ ನಿವಾಸಿ ಆರೋಪಿ ಮೊಹಮ್ಮದ್ ಮುಸ್ತಫಾ ಎಂಬಾತನು ಉಚ್ಚ ನ್ಯಾಯಾಲಯದಲ್ಲಿ 19-10-2020 ರಂದು ಜಾಮೀನು ಪಡೆದಿದ್ದು, ನಂತರ ಸರ್ವೋಚ್ಚ ನ್ಯಾಯಾಲಯದಲ್ಲಿ 22-4-2022 ರಂದು ಜಾಮೀನು ರದ್ದು ಮಾಡಿರುತ್ತದೆ. ಅಂದಿನಿಂದಲೂ ಆರೋಪಿ ಮೊಹಮ್ಮದ್ ಮುಸ್ತಫಾನು ತಲೆಮರೆಸಿಕೊಂಡು ನಕಲಿ ಪಾಸ್ಪೋರ್ಟ್ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದನು. ಈತನ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದ್ದು, 30-06-2025 ರಂದು ಮುಲ್ಕಿಯ ಪಕ್ಷಿಕೆರೆ ಬಳಿ ಪತ್ತೆ ಮಾಡಿ ಮುಂದಿನ ಕ್ರಮದ ಬಗ್ಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಈತನ ವಿಚಾರಣೆಯಲ್ಲಿ ಈತನು ನಕಲಿ ಪಾಸ್ಪೋರ್ಟ್ನ್ನು ಪಡೆದು ಓಮನ್ ರಾಷ್ಟ್ರಕ್ಕೆ ಪರಾರಿಯಾಗಿ ನಂತರ ನೇಪಾಳ ಮೂಲಕ ಭಾರತ ದೇಶಕ್ಕೆ ಬಂದಿರುವುದಾಗಿ ತಿಳಿದಿರುತ್ತದೆ.
ನಕಲಿ ಪಾಸ್ಪೋರ್ಟ್ ಹೊಂದಿರುವ ಬಗ್ಗೆ ಈತನ ವಿರುದ್ದ ಬೆಂಗಳೂರಿನ ಬಸನಗುಡಿ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿರುತ್ತದೆ. ಇದಲ್ಲದೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ 4 ಮತ್ತು ಇತರೆ ಜಿಲ್ಲೆಯಲ್ಲಿ ಒಟ್ಟು 5 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಚಿಕ್ಕಮಗಳೂರು, ಉಡುಪಿ ಜಿಲ್ಲೆಯ ಠಾಣೆಗಳಲ್ಲಿ ಈತನ ವಿರುದ್ದ ಎರಡು ಪ್ರಕರಣಗಳಲ್ಲಿ ವಾರಂಟು ಬಾಕಿ ಇರುತ್ತದೆ.


