ಮಂಗಳೂರು : ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಯೋಗದಲ್ಲಿ ಮಾವು -ಹಲಸು ಮೇಳ ನಗರದ ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯ ಮಂಜು ಪ್ರಾಸಾದದ ಆವರಣದಲ್ಲಿ ಶನಿವಾರ
ಆರಂಭಗೊಂಡಿತು.
ಮೇಳ ಉದ್ಘಾಟಿಸಿದ ಆರೂರು ಲಕ್ಷ್ಮೀ ರಾವ್ ಮಾತನಾಡಿ ‘ ಪ್ರಕೃತಿಯಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದ ಮಾವು ಮತ್ತು ಹಲಸು ಆರೋಗ್ಯಕರ ಹಣ್ಣುಗಳಾಗಿದ್ದು, ನಮ್ಮ ಆಹಾರ ಪದ್ಧತಿಯನ್ನು ನೆನಪಿಸಲು ಇಂತಹ ಮೇಳಗಳು ಪೂರಕವಾಗಿವೆ’ಎಂದರು.
ಮುಖ್ಯ ಅತಿಥಿಯಾಗಿದ್ದ ಶಾರದಾ ಸಮೂಹ ಸಂಸ್ಥೆಗಳ ಪ್ರೊ.ಎಂ.ಬಿ.ಪುರಾಣಿಕ್ ಮಾತನಾಡಿ’ ಹಲಸು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಅಂಶ ಇತ್ತೀಚಿನ ಸಂಶೋಧನೆಗಳಲ್ಲಿ ಕೂಡಾ ಸಾಬೀತಾಗಿದೆ’ ಎಂದರು.
ಸ್ವದೇಶಿ ಗೋವುಗಳ ಹಾಗೂ ಪ್ರಾದೇಶಿಕ ಸಸ್ಯಗಳ ತಳಿ ಸಂರಕ್ಷಕ ಡಾ. ಮನೋಹರ ಉಪಾಧ್ಯಾಯ ಅವರು ಆಹಾರ ಪದ್ದತಿ ಬಗ್ಗೆ ಉಪನ್ಯಾಸ ನೀಡಿದರು. ಎಂಎಲ್ಸಿ ಐವನ್ ಡಿಸೋಜಾ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ , ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯ ಕಟ್ಟೆ, ಅನಿವಾಸಿ ಭಾರತೀಯ ಉದ್ಯಮಿ ಮ್ಯಾಥ್ಯೂ ಮುಖ್ಯ ಅತಿಥಿಗಳಾಗಿದ್ದರು.
ಸಾವಯವ ಬಳಗದ ರತ್ನಾಕರ ಕುಳಾಯಿ , ವಿಜಯಲಕ್ಷ್ಮಿ ಶೆಟ್ಟಿ, ಜನಾರ್ದನ ಹಂದೆ, ಶರತ್ ಕುಮಾರ್ , ವಿನೋದಾ ಕಲ್ಕೂರ ಉಪಸ್ಥಿತರಿದ್ದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು. ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜೀ , ಶಾಸಕ ವೇದವ್ಯಾಸ ಕಾಮತ್ ಮುಂತಾದವರು ಮೇಳಕ್ಕೆ ಆಗಮಿಸಿ ಶುಭ ಹಾರೈಸಿದರು.


