ಮ೦ಗಳೂರು: ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಾರ್ಚ್ 8 ರಂದು ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿರುವ ಸ್ನೇಹಾಲಯ ಸಭಾಂಗಣದಲ್ಲಿ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರ್ಥಪೂರ್ಣ ಮತ್ತು ಉತ್ಸಾಹಭರಿತ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳು, ಟ್ರಸ್ಟಿಗಳು, ಸುತ್ತಮುತ್ತಲಿನ ಮಹಿಳೆಯರು, ಸಿಬ್ಬಂದಿ ಸದಸ್ಯರು ಮತ್ತು ಹಿತೈಷಿಗಳು ಭಾಗವಹಿಸಿ ಮಹಿಳೆಯರ ಶಕ್ತಿ ಮತ್ತು ಕೊಡುಗೆಗಳನ್ನು ಗೌರವಿಸುವುದರ ಜೊತೆಗೆ ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶವನ್ನು ವ್ಯಕ್ತಪಡಿಸಿದರು.
ಸಂಸ್ಥೆಯ ಇನ್ಸ್ಟಿಟ್ಯೂಷನಲ್ ಇನ್ಚಾರ್ಜ್ ಲವಿಟಾ ಡಿ’ಸೋಜಾ ಹಾಗೂ ಕ್ಲಿನಿಕಲ್ ವಿಭಾಗದ ಮುಖ್ಯಸ್ಥರಾದ ಕ್ಲಿಂಟ್ ಜೋಸೆಫ್ ಅವರು ಸ್ವಾಗತಿಸಿದರು. ಪರಿಸರ ಜಾಗೃತಿಯನ್ನು ಪ್ರತಿಬಿಂಬಿಸುವಂತೆ ಸಸಿಯನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.

ವ್ಯಸನಮುಕ್ತಿ ಕೇಂದ್ರದ ವ್ಯವಸ್ಥಾಪಕರಾದ ರಾಕೇಶ್ ಲೋಬೋ ಅವರು ಅಂತರಾಷ್ಟ್ರೀಯ ಮಹಿಳಾ ದಿನದ ಮಹತ್ವವನ್ನು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಕಾಸರಗೋಡು ವನಿತಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಅಜಿತಾ ಕೆ., ಕಾಸರಗೋಡು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್, ಗೌರವ ಅತಿಥಿಯಾಗಿ ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್ನ ಸ್ಥಾಪಕಿ ಮತ್ತು ನಿರ್ದೇಶಕಿ ಪ್ರೊಫೆಸರ್ ಹಿಲ್ಡಾ ರಾಯಪ್ಪನ್, ಎಸ್ಕೆಡಿಆರ್ಡಿಪಿ (ರಿ.) ಮಂಜೇಶ್ವರ ತಾಲೂಕು ಯೋಜನಾ ಅಧಿಕಾರಿ ಶಶಿಕಲಾ ಸುವರ್ಣ, ಶಿಲ್ಪಾ ಕಿಚನ್ನ ಸ್ಥಾಪಕಿ ಶಿಲ್ಪಾ ರಾಜ್, ಸ್ನೇಹಾಲಯದ ಕಾರ್ಯದರ್ಶಿ ಮತ್ತು ಟ್ರಸ್ಟಿ ಓಲಿವಿಯಾ ಕ್ರಾಸ್ತಾ ಹಾಗೂ ಟ್ರಸ್ಟಿ ಸರಿತಾ ಕ್ರಾಸ್ತಾ ಅವರ ಉಪಸ್ಥಿತರಿದ್ದರು.
ಕೌನ್ಸೆಲರ್ ಶ್ರೀ ಜೆಸ್ವಿನ್ ಎನ್. ಡಿ. ಅವರು ವ೦ದಿಸಿದರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ರೆಮೊನಾ ಎವೆಟ್ ಪೆರೈರಾ ಮತ್ತು ಹೋರೈಜನ್ ಡ್ಯಾನ್ಸ್ ಕ್ರೂ ಅವರ ನೃತ್ಯ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಉತ್ಸಾಹ ಮತ್ತು ರಂಗು ತುಂಬಿದವು. ಸ್ನೇಹಾಲಯದ ಸ್ಥಾಪಕರಾದ ಬ್ರೋ. ಜೋಸೆಫ್ ಕ್ರಾಸ್ತಾ ಅವರು ಫಲಾನುಭವಿಗಳಿಗೆ ಸೀರೆಗಳು ಮತ್ತು ಉಡುಗೊರೆಗಳನ್ನು ವಿತರಿಸಿದರು.


