ಮಂಗಳೂರು: ಮಕ್ಕಳು ಕಾಣೆಯಾದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ವಿಳಂಬವಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಸೂಚಿಸಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಕ್ಕಳ ಕಲ್ಯಾಣ ಹಾಗೂ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಒ೦ದು ವರ್ಷದಲ್ಲಿ ಜಿಲ್ಲೆಯಲ್ಲಿ 86 ಮಕ್ಕಳು ಕಾಣೆಯಾದ ಬಗ್ಗೆ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಪೈಕಿ 79 ಮಕ್ಕಳು ಪತ್ತೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಮಕ್ಕಳು ಕಾಣೆಯಾದ ಪ್ರಕರಣಗಳ ಬಗ್ಗೆ ಒತ್ತು ನೀಡಿ ತ್ವರಿತವಾಗಿ ಮಕ್ಕಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಬಾಲ ನ್ಯಾಯ ಕಾಯ್ದೆಯಡಿ ನೋಂದಣಿಯಾದ ಅನಾಥಾಲಯ, ವಿಶೇಷ ಮಕ್ಕಳ ಸಂಸ್ಥೆಗಳು ನಿರ್ಗತಿಕ ಮಕ್ಕಳ ಸಂಸ್ಥೆಗಳು ಸೇರಿದಂತೆ ಜಿಲ್ಲೆಯಲ್ಲಿ 69 ಮಕ್ಕಳ ಮತ್ತು ಪಾಲನಾ ಸಂಸ್ಥೆಗಳಲ್ಲಿ 2581 ಮಕ್ಕಳು ಕಲಿಯುತ್ತಿದ್ದಾರೆ. ಇಂತಹ ಸಂಸ್ಥೆಗಳಿಗೆ ಆಗ್ಗಿಂದಾಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಲ್ಲಿನ ಕಟ್ಟಡಗಳು ಮಕ್ಕಳ ವಾಸ್ತವ್ಯಕ್ಕೆ ಅನುಕೂಲವಾಗಿ ಉತ್ತಮ ಗಾಳಿ, ಬೆಳಕು ಇರುವ ಬಗ್ಗೆ ಹಾಗೂ ಉತ್ತಮ ಆಹಾರ ನೀಡುತ್ತಿರುವ ಬಗ್ಗೆ ಪರಿಶೀಲಿಸಬೇಕು. ಪ್ರತಿ ತಿಂಗಳು ಭೇಟಿ ನೀಡಬೇಕು ಎಂದು ಅವರು ಸೂಚಿಸಿದರು.
ಸಂಕಷ್ಟದಲ್ಲಿರುವ ಮತ್ತು ತೊಂದರೆಗೀಡಾದ ಮಕ್ಕಳಿಗೆ ದಿನದ 24 ಗಂಟೆಗಳ ಕಾಲ ಉಚಿತ ಮತ್ತು ತುರ್ತು ಸೇವೆ ನೀಡುವ ಯೋಜನೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ನ್ನು ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ನಮೂದಿಸಲು ಕ್ರಮಕೈಗೊಳ್ಳಬೇಕು. ಮಕ್ಕಳ ಸಹಾಯವಾಣಿಗೆ ಬರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕಳೆದ ಒಂದು ವರ್ಷದಲ್ಲಿ ಮಕ್ಕಳ ಸಹಾಯವಾಣಿಗೆ 763 ಪ್ರಕರಣಗಳು ಬಂದಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ತಾಲೂಕು ಮಟ್ಟದ ಮಕ್ಕಳ ರಕ್ಷಣಾ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿ ಸಭೆಯನ್ನು ನಿರಂತರವಾಗಿ ನಡೆಸಿ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು.
ಪ್ರೀ ಸ್ಕೂಲ್ಗಳ ನೋಂದಣಿ
ಜಿಲ್ಲೆಯಲ್ಲಿ ನರ್ಸರಿ, ಬೇಬಿ ಸಿಟಿಂಗ್ ಮತ್ತಿತರ ಪ್ರೀ ಸ್ಕೂಲ್ಗಳು ಹೆಚ್ಚುತ್ತಿದ್ದು, ಇಂತಹ ಪ್ರೀ ಸ್ಕೂಲ್ಗಳ ಮೇಲ್ವಿಚಾರಣೆ ಮತ್ತು ನೋಂದಣಿಗೆ ಅಗತ್ಯ ನಿಯಮಗಳನ್ನು ರೂಪಿಸಿ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚಿಸಿದರು.
ರೈಲು ನಿಲ್ದಾಣಗಳಲ್ಲಿ ಮನೆ ಬಿಟ್ಟು ಬಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿರುವುದರಿಂದ ರೈಲ್ವೆ ಪೆÇಲೀಸರೊಂದಿಗೆ ಅಗತ್ಯ ಸಮನ್ವಯ ನಡೆಸುವಂತೆ ಜಿಲ್ಲಾಧಿಕಾರಿಗಳು ಪೆÇಲೀಸ್ ಅಧೀಕ್ಷಕರಿಗೆ ಸೂಚಿಸಿದರು.
ಹೋಟೆಲ್ ಮತ್ತು ಅಂಗಡಿಗಳಲ್ಲಿ ಬಾಲಕಾರ್ಮಿಕರು ಇಲ್ಲದೆ ಇರುವ ಬಗ್ಗೆ ಕಾರ್ಮಿಕ ಇಲಾಖೆ ಆಗ್ಗಿಂದಾಗೆ ಪರಿಶೀಲನೆ ನಡೆಸಬೇಕು. ಎಲ್ಲಾ ಕಾರ್ಖಾನೆ, ಅಂಗಡಿ, ವಾಣಿಜ್ಯ ಸಂಸ್ಥೆಗಳಲ್ಲಿ ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಬೋರ್ಡ್ ಪ್ರದರ್ಶಿಸಬೇಕು. ಇಂತಹ ನಿಯಮ ಉಲ್ಲಂಘಿಸಿದ 92 ಸಂಸ್ಥೆಗಳ ಮೇಲೆ ಕೇಸ್ ದಾಖಲಾಗಿದ್ದು, ಈ ಪೈಕಿ 49 ಪ್ರಕರಣಗಳಲ್ಲಿ ರೂ. 3.06 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಏಪ್ರಿಲ್ 2025 ರಿಂದ 2026-27 ರವರೆಗೆ ಪೋಕ್ಸೋ ಪ್ರಕರಣ 34 ಫಲಾನುಭವಿಗಳಿಗೆ ಬಾಲ ನ್ಯಾಯ ನಿಧಿಯಲ್ಲಿ 1.70 ಲಕ್ಷ ನೆರವು ನೀಡಲಾಗಿದೆ. ಜಿಲ್ಲೆಯ 2 ಮಕ್ಕಳ ದತ್ತು ಕೇಂದ್ರದಲ್ಲಿ ಪ್ರಸ್ತುತ 20 ಮಕ್ಕಳಿದ್ದಾರೆ. 2010 ರಿಂದ 2026 ರ ಇದುವರೆಗೆ ಒಟ್ಟು ಜಿಲ್ಲೆಯ 2 ದತ್ತು ಕೇಂದ್ರಗಳಿಂದ 199 ಮಕ್ಕಳನ್ನು ದತ್ತು ನೀಡಲಾಗಿದೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಾಯೋಜಕತ್ವ ಯೋಜನೆಯಡಿ ಅನಾಥ, ಏಕ ಪೋಷಕ, ಹೆತ್ತವರು ಜೈಲಿನಲ್ಲಿರುವ ಮಕ್ಕಳಿಗೆ ತಿಂಗಳಿಗೆ ರೂ. 4 ಸಾವಿರದಂತೆ ನೆರವು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 2026 ಮಾರ್ಚ್ ವರೆಗೆ 1035 ಮಕ್ಕಳಿಗೆ ನೆರವು ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ರಶ್ಮಿ ಸಭೆಗೆ ತಿಳಿಸಿದರು.
18 ವರ್ಷದೊಳಗಿನ ಹೆಚ್.ಐ.ವಿ / ಏಡ್ಸ್ ಸೋಂಕಿತ ಸಂಕಷ್ಟದಲ್ಲಿರುವ ಮಕ್ಕಳಿಗೆ ವಿಶೇಷ ಪಾಲನಾ ಯೋಜನೆಯಡಿ ಪ್ರತಿ ತಿಂಗಳು ರೂ 2 ಸಾವಿರ ಆರ್ಥಿಕ ಸೌಲಭ್ಯ ನೀಡಲಾಗುತ್ತಿದೆ. ಕೋವಿಡ್ ಕಾರಣದಿಂದ ಪೆÇೀಷಕರಿಬ್ಬರನ್ನು ಕಳೆದುಕೊಂಡ ಮಕ್ಕಳಿಗೆ ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯಡಿ ಪ್ರತಿ ತಿಂಗಳು ರೂ. 3500 ಸಹಾಯಧನ ನೀಡಲಾಗುತ್ತಿದೆ. ಜಿಲೆಯಲ್ಲಿ ಇಂತಹ 11 ಫಲಾನುಭವಿಗಳಿದ್ದು, ಈ ಪೈಕಿ 7 ಮಂದಿಗೆ 18 ವರ್ಷ ಪೂರ್ಣಗೊಂಡಿರುತ್ತದೆ ಎಂದು ಅವರು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ರಾಜು ಕೆ ಮಾತನಾಡಿ, ವಿವಿಧ ಹಾಸ್ಟೆಲ್ಗಳಲ್ಲಿರುವ ಹೆಣ್ಣು ಮಕ್ಕಳ ಆರೋಗ್ಯ ತಪಾಸಣೆ, ಕೌನ್ಸಿಲಿಂಗ್ ನಡೆಸಬೇಕು. ಮಕ್ಕಳ ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಕಂಡು ಬಂದರೆ ಅಥವಾ ಯಾವುದೇ ಲೈಂಗಿಕ ಶೋಷಣೆಯ ಮಾಹಿತಿ ನೀಡಿದರೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಜೈಬುನ್ನೀಸಾ, ಹೆಚ್ಚುವರಿ ಪೆÇೀಲಿಸ್ ಅಧೀಕ್ಷಕ ಅನಿಲ್ ಕುಮಾರ್ ಮತ್ತಿತರರು ಇದ್ದರು.


