ಮಂಗಳೂರು: “ಕೃತಜ್ಞತೆಗಿಂತ ಶ್ರೇಷ್ಠ ಗುಣಧರ್ಮವಿಲ್ಲ. ನಿಮ್ಮ ಪೋಷಕರ ತ್ಯಾಗ, ಶಿಕ್ಷಕರ ಬೆಂಬಲ ಮತ್ತು ಧರ್ಮಗುರುಗಳ ಮಾರ್ಗದರ್ಶನವನ್ನು ಎಂದಿಗೂ ಮರೆಯಬೇಡಿ. ಇಂದಿನ ವಿದ್ಯಾರ್ಥಿಗಳಾದ ನೀವು ಭವಿಷ್ಯದ ಸಮಾಜದ ಉಜ್ವಲ ಹೊಳೆಯುವ ನಕ್ಷತ್ರಗಳಾಗಿರುತ್ತೀರಿ.” ಎಂದು ಮಂಗಳೂರಿನ ಬಿಷಪ್ ವಂ| ಡಾ| ಪೀಟರ್ ಪೌಲ್ ಸಲ್ದಾನ್ಹಾ ಹೇಳಿದರು.
ಅವರು ರೊಸಾರಿಯೊ ಕ್ಯಾಥೆಡ್ರಲ್ನಲ್ಲಿ ಕ್ಯಾಥೊಲಿಕ್ ಆರ್ಗನೈಸೇಶನ್ ಫಾರ್ ಡೆವಲಪ್ಮೆಂಟ್ ಆಂಡ್ ಪೀಸ್ (CODP), ಮಂಗಳೂರು ಧರ್ಮಪ್ರಾಂತದಿಂದ ನಿರ್ವಹಿಸಲ್ಪಡುವ ಎಡ್ಯುಕೇರ್ ಬಡ್ಡಿರಹಿತ ಸಾಲರೂಪದ ವಿದ್ಯಾರ್ಥಿವೇತನದ ವಿತರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.
ಎಡ್ಯುಕೇರ್ ವಿದ್ಯಾರ್ಥಿವೇತನವನ್ನು 2013 ರಲ್ಲಿ ಎನ್ಆರ್ಐ ಉದ್ಯಮಿ, ದಾನಿ ಮತ್ತು ವಿಷನ್ ಕೊಂಕಣಿ ಕಾರ್ಯಕ್ರಮದ ಸಂಸ್ಥಾಪಕ / ಪ್ರವರ್ತಕ ಮೈಕಲ್ ಡಿ’ಸೋಜಾ ಮತ್ತು ಅವರ ಕುಟುಂಬವು ಸ್ಥಾಪಿಸಿದ್ದು, ಇದು 12 ವರ್ಷಗಳನ್ನು ಪೂರೈಸಿದೆ. ಇದುವರೆಗೆ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ 29 ಕೋಟಿ ರೂ. ಬಡ್ಡಿರಹಿತ ಸಾಲರೂಪದ ವಿದ್ಯಾರ್ಥಿವೇತನ ವಿತರಿಸಿದೆ. ಫಲಾನುಭವಿಗಳಲ್ಲಿ 125 ವೈದ್ಯರು, 762 ಎಂಜಿನಿಯರ್ಗಳು, 491 ನರ್ಸ್ಗಳು, 904 ಸ್ನಾತಕೋತ್ತರ ವಿದ್ಯಾರ್ಥಿಗಳು, 1,013 ಪದವೀಧರರು ಮತ್ತು 137 ಡಿಪ್ಲೊಮಾ ಹೊಂದಿದವರು ಸೇರಿದ್ದಾರೆ. ಇದರಲ್ಲಿ ₹20 ಕೋಟಿಯನ್ನು ಫಲಾನುಭವಿಗಳು ಮರುಪಾವತಿಸಿದ್ದಾರೆ, ಮತ್ತು ₹9 ಕೋಟಿ ಪ್ರಸ್ತುತ ಚಾಲ್ತಿಯಲ್ಲಿದೆ.
2024–25 ಶೈಕ್ಷಣಿಕ ವರ್ಷಕ್ಕೆ, 284 ವಿದ್ಯಾರ್ಥಿಗಳಿಗೆ 2,45,47,000 ರೂ. ವಿತರಿಸಲಾಗಿದ್ದು, ಇದರಲ್ಲಿ 46 ಪದವೀಧರರು, 58 ಸ್ನಾತಕೋತ್ತರ ವಿದ್ಯಾರ್ಥಿಗಳು, 72 ಎಂಜಿನಿಯರಿಂಗ್ ವಿದ್ಯಾರ್ಥಿಗಳು, 84 ನರ್ಸಿಂಗ್ ವಿದ್ಯಾರ್ಥಿಗಳು ಮತ್ತು 24 ವೈದ್ಯಕೀಯ ವಿದ್ಯಾರ್ಥಿಗಳು ಸೇರಿದ್ದಾರೆ. ಪ್ರಸ್ತುತ 2025–26 ಶೈಕ್ಷಣಿಕ ವರ್ಷಕ್ಕೆ, 220 ವಿದ್ಯಾರ್ಥಿಗಳಿಗೆ 1,90,10,000 ರೂ. ವಿತರಿಸಲಾಗಿದ್ದು , ಇದರಲ್ಲಿ 87 ಪದವೀಧರರು, 43 ಸ್ನಾತಕೋತ್ತರ ವಿದ್ಯಾರ್ಥಿಗಳು, 52 ಎಂಜಿನಿಯರಿಂಗ್ ವಿದ್ಯಾರ್ಥಿಗಳು, 31 ನರ್ಸಿಂಗ್ ವಿದ್ಯಾರ್ಥಿಗಳು ಮತ್ತು 7 ವೈದ್ಯಕೀಯ ವಿದ್ಯಾರ್ಥಿಗಳು ಸೇರಿದ್ದಾರೆ.
ಸಿಒಡಿಪಿ ಯ ನಿರ್ದೇಶಕ ವಂ. ವಿನ್ಸೆಂಟ್ ಡಿ’ಸೋಜಾ ಸ್ವಾಗತಿಸಿ ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಾದಾನಿ ಮೈಕಲ್ ಡಿ’ಸೋಜಾರವರನ್ನು ಮಂಗಳೂರು ಧರ್ಮಪ್ರಾಂತ್ಯದ “ಸಾಮಾಜಿಕ ಅಭಿವೃದ್ಧಿಯ ಮಿಷನರಿ” ಎಂದು ವಂ| ವಿನ್ಸೆಂಟ್ ಡಿ ಸೊಜಾ ಬಣ್ಣಿಸಿದರು.
ವಿದ್ಯಾರ್ಥಿಗಳಾದ ಮೆಲಿಶಾ ಪ್ರಿಯಾ ಕ್ವಾಡ್ರಸ್ (ಕಿನ್ನಿಗೋಳಿ), ಶಾಲೆಟ್ ರೆಬೆಲ್ಲೋ (ಮುಲ್ಕಿ), ಜಾಯ್ಸ್ ಶರಲ್ ಡಿ’ಸೋಜಾ (ಶಂಕರಪುರ), ನಿರ್ಮಲಾ (ಕಡಬ), ಪ್ರದೀಪ್ ಪಿಂಟೋ (ಬಿಜೈ), ಶರಲ್ ಡಿ’ಸೋಜಾ (ಮರಿಯಾಶ್ರಮ), ನಿಶ್ಮಿತಾ (ವಿಟ್ಲ), ಮತ್ತು ಅನೀಶ್ ಡಿ’ಸೋಜಾ (ಜರ್ಮನಿ) ಮೈಕಲ್ ಡಿ’ಸೋಜಾ, ಅವರ ಕುಟುಂಬ ಮತ್ತು ಸಿಒಡಿಪಿಗೆ ಹೃದಯಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿ, ತಮ್ಮ ಅನುಭವಗಳನ್ನು ಹಂಚಿಕೊಂಡರು.
ಮೈಕಲ್ ಡಿ ಸೊಜಾ ಅವರ ಪತ್ನಿ ಫ್ಲೇವಿಯಾ ಡಿ’ಸೋಜಾ, ಮಗ ಮನು, ಎಡುಕೇರ್ ಸಲಹಾ ಸಮಿತಿ ಸದಸ್ಯರಾದ ಲೈನಲ್ ಅರಾನ್ಹಾ, ಸ್ಟೀಫನ್ ಪಿಂಟೋ, ಒಸ್ವಲ್ಡ್ ರೊಡ್ರಿಗಸ್ ಮತ್ತು ಹೆನ್ರಿ ಡಿ’ಸೋಜಾ ಉಪಸ್ಥಿತರಿದ್ದರು.
ಎಡ್ಯುಕೇರ್ ಫಲಾನುಭವಿ ಶೈನಿ ಡಿ’ಸೋಜಾ ನಿರೂಪಿಸಿದರು. ಸಿಒಡಿಪಿ ಸಹಾಯಕ ನಿರ್ದೇಶಕ ವಂ. ಲಾರೆನ್ಸ್ ಕುಟಿನ್ಹಾ ವಂದಿಸಿದರು. 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


