ಮ೦ಗಳೂರು: ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ, ಮಂಗಳೂರುರವರ ಸಹಭಾಗಿತ್ವದಲ್ಲಿ ಮಂಗಳೂರು ನಗರದಲ್ಲಿ ಫೆ.20 ರಿ೦ದ ಫೆ. 28 ರವರೆಗೆ ಕರಾವಳಿ ಮೈದಾನದಲ್ಲಿ ರಾಷ್ಟ್ರ ಮಟ್ಟದ ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಬೃಹತ್ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳ- ನಮ್ಮ ಸರಸ್ ಮೇಳ-2026ನ್ನು ಆಯೋಜಿಸಲಾಗಿದೆ.
15 ವಿವಿಧ ರಾಜ್ಯ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸ್ವ-ಸಹಾಯ ಗುಂಪಿನ ಮಹಿಳೆಯರು ತಮ್ಮ ಜಿಲ್ಲೆಯ ಪ್ರಮುಖ ಉತ್ಪನ್ನಗಳೊಂದಿಗೆ ಭಾಗವಹಿಸುತ್ತಿದ್ದು, 120 ಮಳಿಗೆಗಳಲ್ಲಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮತ್ತು ಪ್ರತ್ಯೇಕವಾಗಿ ಆಹಾರ ಮೇಳದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳ 30 ಲೈವ್ ಫುಡ್ ಕೋರ್ಟ್ಗಳನ್ನುನ ಸ್ಥಾಪಿಸಲಾಗುತ್ತಿದೆ. ಈ ಮೇಳಕ್ಕೆ ಸಾರ್ವಜನಿಕರಿಗೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಪ್ರತಿ ದಿನ ಬೆಳಿಗ್ಗೆ 10.30 ಯಿಂದ ರಾತ್ರಿ 9.30ರವರೆಗೆ ಮೇಳದ ಪ್ರದರ್ಶನಕ್ಕೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಮೇಳದ ವೈಶಿಷ್ಠತೆಗಳು: ಮಂಗಳೂರಿನ ಈ ಮೇಳದ ಮಳಿಗೆಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳಾದ ಚನ್ನಪಟ್ಟಣದ ಮರದ ಗೊಂಬೆಗಳು, ಕೊಪ್ಪಳದ ಕಿನ್ನಾಳ ಆಟದ ಸಾಮಾನುಗಳು, ಮೊಳಕಾಲ್ಮೂರು ಸೀರೆಗಳು, ಇಳಕಲ್ ಸೀರೆಗಳು, ರೇಷ್ಮೆ ಸೀರೆಗಳು, ವಿವಿಧವಾದ ಆಕರ್ಷಣೆಯ ಬಟ್ಟೆಗಳು, ನಾರಿನ ಉತ್ಪನ್ನದ ಬ್ಯಾಗ್ಗಳು, ಮಸಾಲಾ ಉತ್ಪನ್ನಗಳು, ಸಿರಿಧಾನ್ಯ ಉತ್ಪನ್ನಗಳು, ಮೌಲ್ಯವರ್ಧಿತ ಕರಾವಳಿ ಉತ್ಪನ್ನಗಳು, ವಿವಿಧ ಬಗೆಯ ಖಾದಿ ಉತ್ಪನ್ನಗಳು, ಬಾಳೆನಾರಿನಿಂದ ಉತ್ಪಾದಿಸಿದ ಉತ್ಪನ್ನಗಳು, ಗೃಹಾಲಂಕಾರಿಕ ವಸ್ತುಗಳು, ಆಯುರ್ವೇದ ಉತ್ಪನ್ನಗಳು, ಪಾರಂಪರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ನವೀನ ವಿನ್ಯಾಸದ ಆಭರಣಗಳು, ಆಹಾರ ಉತ್ಪನ್ನಗಳು ಮುಂತಾದವುಗಳು ಸಾರ್ವಜನಿಕರಿಗೆಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ.
“ಅಕ್ಕ-ಕೆಫೆ” ಅಕ್ಕಆಹಾರ ಮಳಿಗೆಗಳಲ್ಲಿ (ಅಕ್ಕಫುಡ್ ಕೋರ್ಟ್)ನಲ್ಲಿ ಉತ್ತರಕರ್ನಾಟಕದಲ್ಲಿ ಹೆಸರುವಾಸಿಯಾದ ಗಿರಮಿಟ್/ಚುರುಮರಿ ಮಂಡಕ್ಕಿ, ಜೋಳದಖಡಕ್ ಬಿಸಿರೊಟ್ಟಿ, ಹೋಳಿಗೆ ಸೇರಿದಂತೆ ಬೆಳಗಾವಿ ಕುಂದಾ, ಧಾರವಾಡ ಪೇಡ, ಮೈಸೂರ್ಪಾಕ್, ಮಂಗಳೂರು ನೀರ್ದೋಸೆ, ಖಾರಬಾತ್, ಕಡಬು ಮತ್ತು ಮಾಂಸಹಾರಿ ಆಹಾರಗಳಾದ ಫ್ರಾನ್ಸ್ ಪ್ರೈ, ರೋಟಿ-ಚಿಕನ್ಸುಕ್ಕ, ರಾಗಿಮುದ್ದೆ- ಚಿಕನ್ಕರಿ ಬಿರಿಯಾನಿ, ಫ್ರೆಶ್ ಜ್ಯೂಸ್ ಜೊತೆಗೆ ಹೊರರಾಜ್ಯದ ತಿನಿಸುಗಳನ್ನು 30 ವಿವಿಧ ಮಳಿಗೆಗಳಲ್ಲಿ ಸ್ಥಳದಲ್ಲೇ ತಯಾರಿಸಿಕೊಡಲಾಗುವುದು.
ಸಾಂಸ್ಕೃತಿಕ ಸಂಜೆ: ಪ್ರತಿ ದಿನ ಸಂಜೆ 6.30 ರಿಂದ 9.00 ಗಂಟೆಯವರೆಗೆ ಮೇಳದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಹಯೋಗದಲ್ಲಿ ಸಂಗೀತ, ನೃತ್ಯ ರೂಪಕಗಳು, ಪೊಲೀಸ್ ಬ್ಯಾಂಡ್ ರಾಜ್ಯದ ಪ್ರಖ್ಯಾತ ಗಾಯಕರಿಂದ ಸಾಂಸ್ಕೃತಿಕ ಸಂಜೆ ಏರ್ಪಡಿಸಲಾಗಿದೆ.
ತರಬೇತಿ ಪ್ರತಿ ದಿನ ಬೆಳಿಗ್ಗೆ 11.30 ರಿಂದ 1.30 ರವರೆಗೆ ಮಹಿಳೆಯರು ಉದ್ಯಮ ಚಟುವಟಿಕೆ ಕೈಗೊಳ್ಳಲು ಬೆಂಬಲಿಸುವ ವಿವಿಧ ತರಬೇತಿ ಹಾಗೂ ಉಪನ್ಯಾಸಗಳನ್ನು ಆಯೋಜಿಸಲಾಗಿದೆ.
ಮಂಗಳೂರಿನಲ್ಲಿ ಮೊದಲನೇ ಬಾರಿಗೆ ಆಯೋಜಿಸಲಾಗುತ್ತಿರುವ ಈ ಮೇಳವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದು, ಶ್ರೀ ಶೀವರಾಜ್ ಸಿಂಗ್ ಚವ್ಹಾಣ್, ಮಾನ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಕೇಂದ್ರ ಸಚಿವರು ಭಾರತ ಸರ್ಕಾರ, ಶ್ರೀ ಡಿ.ಕೆ ಶಿವಕುಮಾರ್, ಮಾನ್ಯ ಉಪಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ಶ್ರೀ ಯು.ಟಿ.ಖಾದರ್ ಫರೀದ್, ಮಾನ್ಯ ಸಭಾಧ್ಯಕ್ಷರು, ಕರ್ನಾಟಕ ವಿಧಾನ ಸಭೆ, ಶ್ರೀ ದಿನೇಶ್ ಗುಂಡೂರಾವ್, ಮಾನ್ಯ ಸಚಿವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಶ್ರೀ ಶರಣ ಪ್ರಕಾಶ ಆರ್ ಪಾಟೀಲ್, ಮಾನ್ಯ ಸಚಿವರು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಶ್ರೀ ಆರ್ ಅಶೋಕ್, ಮಾನ್ಯ ವಿರೋಧ ಪಕ್ಷದ ನಾಯಕರು ವಿಧಾನ ಸಭೆ, ಶ್ರೀ ಛಲವಾದಿ ನಾರಾಯಣಸ್ವಾಮಿ, ವಿರೋಧ ಪಕ್ಷದ ನಾಯಕರು, ವಿಧಾನ ಪರಿಷತ್, ಶ್ರೀ ಕ್ಯಾ.ಬ್ರಿಜೇಶ್ ಚೌಟ, ಮಾನ್ಯ ಸಂಸದರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರರವರು ಘನ ಉಪಸ್ಥಿತಿ ವಹಿಸಲಿದ್ದು, ಶ್ರೀ ವೇದವ್ಯಾಸ ಕಾಮತ್ ಮಾನ್ಯ ಶಾಸಕರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ರವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.


