ಮಂಗಳೂರು: ಪ್ರಸಿದ್ಧ ಅನಿವಾಸಿ ಉದ್ಯಮಿ ಮತ್ತು ಮಹಾದಾನಿ ಮೈಕಲ್ ಡಿ’ಸೋಜಾ ಅವರ ಕಾರವಾರ ಮತ್ತು ಗುಲ್ಬರ್ಗಾ ಜೋಡಿ ಧರ್ಮಪ್ರಾಂತ್ಯಗಳ ಸಮುದಾಯಗಳನ್ನು ಸಮರ್ಥಗೊಳಿಸುವ ಗುರಿಯುಳ್ಳ ಮಹತ್ವಾಕಾಂಕ್ಷಿ ವಿಶನ್ 2030 ಕಾರ್ಯಯೋಜನೆಗೆ ಮಂಗಳೂರು ಧರ್ಮಕ್ಷೇತ್ರದ, ಧರ್ಮಾಧ್ಯಕ್ಷರ ನಿವಾಸದಲ್ಲಿ ತಿಳುವಳಿಕೆ ಒಡಂಬಡಿಕೆಗೆಸಹಿ ಮಾಡುವುದರ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು. ಕಾರವಾರ ಮತ್ತು ಗುಲ್ಬರ್ಗಾ ಧರ್ಮಕ್ಷೇತ್ರಗಳಿಗಾಗಿ ಮೈಕಲ್ ಡಿ’ ಸೊಜಾ ವಿಶನ್ 2030 ಕಾರ್ಯಯೋಜನೆ ವಸತಿ ಮತ್ತು ಶಿಕ್ಷಣ ಕಾರ್ಯಕ್ರಮಗಳ ಮೂಲಕ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಬಿಷಪ್ ವಂದನೀಯ ಡಾ| ಪೀಟರ್ ಪೌಲ್ ಸಲ್ದಾನ್ಹ ಮತ್ತು ಉಡುಪಿಯ ಬಿಷಪ್ ವಂದನೀಯ ಡಾ| ಜೆರಾಲ್ಡ್ ಐಸಾಕ್ ಲೋಬೋ ಉಪಸ್ಥಿತರಿದ್ದರು.
ಮೈಕಲ್ ಡಿ ಸೊಜಾ ಕುಟುಂಬ ಪ್ರೇರಿತ ಶಿಕ್ಷಣ, ಆರೋಗ್ಯ, ವಸತಿ ಮತ್ತು ಸ್ವಸಹಾಯ ಗುಂಪು ಮಾದರಿ ಯೋಜನೆಗಳು 2013ರಿಂದ ಮಂಗಳೂರು ಮತ್ತು ಉಡುಪಿ ಧರ್ಮಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದು ಅದರ ಯಶಸ್ಸಿನ ಮೇಲೆ ವಿಶನ್ 2030 ನಿರ್ಮಿತವಾಗಿದ್ದು, ದೀರ್ಘಕಾಲೀನ ಸಮುದಾಯ ಉನ್ನತೀಕರಣದ ಕಡೆ ಕೇಂದ್ರೀಕೃತವಾಗಿದೆ.

ಮೈಕಲ್ ಡಿ. ಸೋಜಾ ಸಮುದಾಯ ಯೋಜನೆಯ ಸಲಹೆಗಾರ ಓಸ್ವಾಲ್ಡ್ ರೊಡ್ರಿಗಸ್ ಅವರು ಸ್ವಾಗತಿಸಿ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತ ಅವಲೋಕನ ನೀಡಿದರು. ಪ್ರೊ. ಸಿ.ಎ. ಲಾಯ್ನಲ್ ಅರಾನ್ಹಾ ತಿಳಿವಳಿಕೆ ಒಡಂಬಡಿಕೆಯ ಸಂದರ್ಭ ಮತ್ತು ಮಹತ್ವವನ್ನು ವಿವರಿಸಿದರು, ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಗುಲ್ಬರ್ಗಾ ಧರ್ಮಕ್ಷೇತ್ರದ ವಿಕಾರ್ ಜನರಲ್ ಅತೀ ವಂದನೀಯ ಮೊ| ಸಂತೋಷ್ ಬಾಪು ಅವರು ತಮ್ಮ ಧರ್ಮಕ್ಷೇತ್ರದ ಪರವಾಗಿ ಕೃತಜ್ಞತೆ ವ್ಯಕ್ತಪಡಿಸಿದರು ಮತ್ತು ಬಿಷಪ್ ಡುಮಿಂಗ್ ಡಾಯಸ್ ಅವರು ಕಾರವಾರ ಧರ್ಮಕ್ಷೇತ್ರದ ಪರವಾಗಿ ಧನ್ಯವಾದಗಳನ್ನು ತಿಳಿಸಿದರು. ಮೈಕಲ್ ಡಿ’ ಸೋಜಾ ಮತ್ತು ಅವರ ಪತ್ನಿ ಫ್ಲೇವಿಯಾ ಡಿ’ ಸೋಜಾ ಅವರನ್ನು ಕಾರವಾರ ಮತ್ತು ಗುಲ್ಬರ್ಗಾ ಧರ್ಮಕ್ಷೇತ್ರಗಳ ವತಿಯಿಂದ ಶಾಲು ಮತ್ತು ಪುಷ್ಪಗುಚ್ಛಗಳೊಂದಿಗೆ ಸನ್ಮಾನಿಸಲಾಯಿತು.
ಪ್ರಮುಖ ಅತಿಥಿಗಳಾಗಿ ಕರ್ನಾಟಕ ಜೆಸ್ಯೂಟ್ಗಳ ಪ್ರಾಂತೀಯ ಮುಖ್ಯಸ್ಥರಾದ ವಂ. ಡಯೋನಿಯಸ್ ವಾಸ್ ಎಸ್.ಜೆ.; ಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ವಂ. ಡಾ. ರಾಜೇಶ್ ರೊಸಾರಿಯೋ; ಮತ್ತು ಅಪೋಸ್ತಲಿಕ್ ಕಾರ್ಮೆಲೈಟ್ಗ ಪ್ರಾಂತೀಯ ಮುಖ್ಯಸ್ಥೆ ವಂ. ಭ. ನವೀನ್ ಎ.ಸಿ. ಮತ್ತು ಕಾರವಾರ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊ| ವಂ| ರಿಚರ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು.


