ಮ೦ಗಳೂರು: ಮುಂಬೈನಿಂದ ಮಾದಕ ವಸ್ತು ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿರುವ ಮಂಗಳೂರು ನಗರದ ಸಿಸಿಬಿ ಘಟಕದ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 6 ಆರೋಪಿಗಳನ್ನು ಬ೦ಧಿಸಿದ್ದಾರೆ.
ಆರೋಪಿಗಳಿಂದ 22,30,000 ರೂ. ಮೌಲ್ಯದ 111.83 ಗ್ರಾಂ ಎಂಡಿಎಂಎ ಮತ್ತು 1,90.000 ರೂ. ಮೌಲ್ಯದ 21.03 ಗ್ರಾಂ ಕೊಕೇನ್ ವಶಕ್ಕೆ ಪಡೆಯಲಾಗಿದೆ.

ಚಿರಾಗ್ ಸನಿಲ್, ಗಾಂಧಿ ನಗರ, ಕಾವೂರು,ಆಲ್ವಿನ್ ಕ್ಲಿಂಟನ್ ಡಿ ಸೋಜಾ, ಹೊಯಿಗೆ ಬೈಲು ಅಶೋಕನಗರ, ಅಬ್ದುಲ್ ಕರೀಂ ನಿಲಾಂಬುರ್ ತಾಲೂಕು, ಮಲ್ಲಾಪ್ಪುರಂ ಜಿಲ್ಲೆ ಕೇರಳ,ಜನನ್ @ ಜನನ್ ಜಗನ್ನಾಥ, ಸಿಲ್ವರ್ ಗೇಟ್ ಕುಲಶೇಖರ, ಮಂಗಳೂರು ,ರಾಜೇಶ್ ಬಂಗೇರ @ ಅಚ್ಚು @ ರಕ್ಷಿತ್, ಬೋಳೂರು ಪರಪು, ಮಂಗಳೂರು,ವರುಣ್ ಗಾಣಿಗ ಅಶೋಕನಗರ ದಂಬೆಲ್ ಮಂಗಳೂರು ಬ೦ಧಿತ ಆರೋಪಿಗಳು.
ಮಂಗಳೂರು ನಗರದ ಸಿಸಿಬಿ ಘಟಕದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಮಾಹಿತಿ ಮೇರೆಗೆ ಕಾವೂರಿನ ಗಾಂಧಿನಗರದ ಮಲ್ಲಿ ಲೇ ಔಟ್ ಎಂಬಲ್ಲಿ ಸೆ. 21ರಂದು ಬೆಳಿಗ್ಗೆ ದಾಳಿ ನಡೆಸಿದಾಗ ಸ್ಕೂಟರ್ ನಲ್ಲಿ ಇಬ್ಬರು ಯುವಕರು ಎಂಡಿಎಂಎ ಮಾದಕ ವಸ್ತುವಿನೊಂದಿಗೆ ಪತ್ತೆಯಾಗಿದ್ದರು. ಪರಾರಿಯಾಗಲು ಪ್ರಯತ್ನಿಸಿದ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಾವೂರಿನ ವಾಸಿಗಳಾದ ಚಿರಾಗ್ ಸನಿಲ್ ಮತ್ತು ಆಲ್ವಿನ್ ಕ್ಲಿಂಟನ್ ಡಿ ಸೋಜಾ ಎಂದು ತಿಳಿದುಬಂದಿದ್ದು, ಅವರಿಂದ 22,30,000 ರೂ. ಮೌಲ್ಯದ 111.83 ಗ್ರಾಂ ಎಂಡಿಎಂಎ ಅನ್ನು ವಶಪಡಿಸಿಕೊಳ್ಳಲಾಯಿತು. ದೊರೆತ ಈ ಮಾದಕ ವಸ್ತು ಮೂಲದ ಬಗ್ಗೆ ವಿಚಾರಿಸಲಾಗಿ ಕೇರಳದ ಅಬ್ದುಲ್ ಕರೀಂ ಎಂಬಾತನು ನೀಡಿದ ಹಣದಿಂದ ಮುಂಬೈಯಲ್ಲಿ ವಾಸವಿರುವ ಆಫ್ರಿಕನ್ ಪ್ರಜೆ ಬೆಂಜಮಿನ್ ಎಂಬಾತನಿಂದ ಆರೋಪಿ ಚಿರಾಗ್ ಸನಿಲ್ ಖರೀದಿ ಮಾಡಿ ತಂದಿರುವ ಬಗ್ಗೆ ತಿಳಿದು ಬಂದಿತು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣದಲ್ಲಿ ಮಾದಕ ವಸ್ತು ಖರೀದಿಸಲು ಹಣವನ್ನು ನೀಡಿದ ಅಬ್ದುಲ್ ಕರೀಂ ಇ.ಕೆ ಎಂಬಾತನನ್ನು ಸೆ. 22ರಂದು ಮಂಗಳೂರು ಕೇಂದ್ರ ರೇಲ್ವೆ ನಿಲ್ದಾಣದ ಬಳಿ ದಸ್ತಗಿರಿ ಮಾಡಲಾಯಿತು.
ಆರೋಪಿಗಳನ್ನು ಕೂಲಂಕುಷವಾಗಿ ವಿಚಾರಿಸಿದಾಗ ತಮ್ಮ ಬಳಿ ಇದ್ದ ಕೊಕೇನ್ ಮಾದಕ ವಸ್ತುಗಳನ್ನು ಈಗಾಗಲೇ ಮೂರು ವ್ಯಕ್ತಿಗಳಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದರು. ಈ ಬಗ್ಗೆ ಸಿಸಿಬಿ ಘಟಕದ ಪೊಲೀಸ್ ಉಪನಿರೀಕ್ಷಕರು ಸದರಿ ವ್ಯಕ್ತಿಗಳ ಮಾಹಿತಿ ಪಡೆದು ಸೆ.21 ರಂದು ರಾತ್ರಿ 8.45 ಗಂಟೆಗೆ ಮಣ್ಣಗುಡ್ಡೆಯ ಸೆಂಟ್ರಲ್ ವೇರ್ ಹೌಸ್ ಬಳಿ ಮೂರು ಸ್ಕೂಟರ್ಗಳಲ್ಲಿ ನಿಂತುಕೊಂಡಿದ್ದವರ ಮೇಲೆ ದಾಳಿ ಮಾಡಿದರು. ಅವರು ತಪ್ಪಿಸಿ ಪರಾರಿಯಾಗಲು ಪ್ರಯತ್ನಿಸಿದ್ದು, ಅವರಿಂದ ಸುಮಾರು 1,90.000 ರೂ. ಮೌಲ್ಯದ- 21.03 ಗ್ರಾಂ ಕೊಕೇನ್ ಸ್ವಾದೀನಪಡಿಸಿಕೊ೦ಡಿದ್ದು, ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಜನನ್ @ ಜನನ್ ಜಗನ್ನಾಥ, ರಾಜೇಶ್ ಬಂಗೇರ, ಮತ್ತು ವರುಣ್ ಗಾಣಿಗ ಅವರನ್ನು ವಶಕ್ಕೆ ಪಡೆದು ದೂರು ನೀಡಿದ ಮೇರೆಗೆ (ಒಟ್ಟು 5 ಜನ ಆರೋಪಿಗಳ ಮೇಲೆ) ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಎರಡೂ ಪ್ರಕರಣಗಳಲ್ಲಿ ದಸ್ತಗಿರಿಯಾದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾರೆ.


