ಮ೦ಗಳೂರು: ಫೆಬ್ರವರಿಯಲ್ಲಿ ‘ನನ್ಹೇ ಫರಿಷ್ಟೇ’ ಕಾರ್ಯಾಚರಣೆಯಡಿ ನೈಋತ್ಯ ರೈಲ್ವೆಯ ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿಯಿಂದ 38 ಬಾಲಕರು ಹಾಗೂ 12 ಬಾಲಕಿಯರು ಸೇರಿ ಒಟ್ಟು 50 ಮಕ್ಕಳ ರಕ್ಷಣೆ ಮಾಡಲಾಗಿದೆ.
ಅಗತ್ಯ ಪರಿಶೀಲನೆಯ ನಂತರ ಅವರ ಕುಟುಂಬಗಳಿಗೆ ಅಥವಾ ಎನ್ಜಿಒ/ಪೊಲೀಸರಿಗೆ ಒಪ್ಪಿಸಿದೆ. ವಿವಿಧ ಕಾರಣಗಳಿಂದ ತಮ್ಮ ಕುಟುಂಬಗಳಿಂದ ದೂರವಾದ ಈ ಮಕ್ಕಳನ್ನು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಪತ್ತೆಹಚ್ಚಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಆಪರೇಶನ್ ಸತರ್ಕ
ಆಪರೇಶನ್ ಸತರ್ಕ ಅಡಿಯಲ್ಲಿ 7 ಮದ್ಯದ ಪ್ರಕರಣಗಳನ್ನು ಪತ್ತೆಹಚ್ಚಿ, ಸುಮಾರು 100 ಲೀಟರ್ (142 ಬಾಟಲ್) ಮದ್ಯವನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ63,346 ರೂ.. ಇವುಗಳನ್ನು ಎಕ್ಸೈಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆಪರೇಶನ್ ನಾರ್ಕೋ ಅಡಿಯಲ್ಲಿ 7 ಪ್ರಕರಣಗಳು ಪತ್ತೆಯಾಗಿದ್ದು, ಸುಮಾರು 57 ಕೆಜಿ ಗಾಂಜಾ (2.71 ಲಕ್ಷ ರೂ. ಮೌಲ್ಯ)ವಶಪಡಿಸಿಕೊಂಡು 3 ಆರೋಪಿಗಳನ್ನು ಬಂಧಿಸಲಾಗಿದೆ. ಮುಂದಿನ ಕ್ರಮಕ್ಕಾಗಿ ಅವರನ್ನು GRP/ಎಕ್ಸೈಸ್ ಅಧಿಕಾರಿಗಳಿಗೆ
ಒಪ್ಪಿಸಲಾಗಿದೆ.
ಪ್ರಯಾಣಿಕರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ:
58 ಸಂದರ್ಭಗಳಲ್ಲಿ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಪ್ರಯಾಣಿಕರು ಕಳೆದುಕೊಂಡ ಅಥವಾ ಬಿಟ್ಟುಹೋದ ಲ್ಯಾಪ್ಟಾಪ್,ಮೊಬೈಲ್ ಫೋನ್, ಆಭರಣಗಳು ಮತ್ತು ಇತರೆ ವೈಯಕ್ತಿಕ ವಸ್ತುಗಳನ್ನು ಪತ್ತೆಹಚ್ಚಿ, ಒಟ್ಟು 44.8 ಲಕ್ಷ ರೂ. ಮೌಲ್ಯದ
ವಸ್ತುಗಳನ್ನು ಅವರ ಮೂಲ ಮಾಲೀಕರಿಗೆ ಹಿಂತಿರುಗಿಸಿದೆ.
ಟಿಕೆಟ್ ದಲ್ಲಾಳಿಗಳ ವಿರುದ್ಧ ಕ್ರಮ – ‘ಉಪಲಬ್ಧ’ ಕಾರ್ಯಾಚರಣೆ:
ನಿಜವಾದ ಪ್ರಯಾಣಿಕರಿಗೆ ರೈಲು ಟಿಕೆಟ್ಗಳು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಹಾಗೂ ಟಿಕೆಟ್ ದಂಧೆ ತಡೆಗಟ್ಟಲು ಕರ್ನಾಟಕ ಮತ್ತು ಗೋವಾ ರಾಜ್ಯಗಳ ವಿವಿಧ ಪ್ರವಾಸ ಏಜೆನ್ಸಿಗಳು ಮತ್ತು ಸ್ಥಳಗಳಲ್ಲಿ ತೀವ್ರ ತಪಾಸಣೆ ನಡೆಸಲಾಗಿದೆ. ಈ ಕಾರ್ಯಾಚರಣೆಯ ವೇಳೆ ರೈಲ್ವೆ ಕಾಯ್ದೆ ಸೆಕ್ಷನ್ 143 ಅಡಿಯಲ್ಲಿ 23 ಪ್ರಕರಣಗಳಲ್ಲಿ 23 ದಲ್ಲಾಳಿಗಳನ್ನು ಬಂಧಿಸಲಾಗಿದೆ.77,804 ರೂ.ಮೌಲ್ಯದ 48 ಲೈವ್ ಟಿಕೆಟ್ಗಳು ಹಾಗೂ 97,496 ರೂ.ಮೌಲ್ಯದ 65 ಬಳಕೆಯಾದ ಟಿಕೆಟ್ಗಳನ್ನು ವಶಪಡಿಸಿಕೊಂಡಿದೆ.
ಮಹಿಳಾ ಪ್ರಯಾಣಿಕರ ಸುರಕ್ಷತೆ – ‘ಮೇರಿ ಸಹೇಲಿ’ ಉಪಕ್ರಮ:
ಮಹಿಳಾ ಕೇಂದ್ರೀಕೃತ ಮೇರಿ ಸಹೇಲಿ ಉಪಕ್ರಮದಡಿ ಒಬ್ಬರೇ ಪ್ರಯಾಣಿಸುವ ಅಥವಾ ಸಹಾಯವಿಲ್ಲದ ಮಹಿಳಾ ಪ್ರಯಾಣಿಕರ ಸುರಕ್ಷಿತ ಪ್ರಯಾಣವನ್ನು ರೈಲ್ವೆ ರಕ್ಷಣಾ ಪಡೆ ಖಚಿತಪಡಿಸಿದೆ. ಅವರ ಸೀಟ್ ಮತ್ತು ಬರ್ತ್ ವಿವರಗಳನ್ನು ಸಂಬಂಧಿತ ನಿಲ್ದಾಣಗಳ ರೈಲ್ವೆರಕ್ಷಣಾ ಪಡೆ ತಂಡಗಳಿಗೆ ಹಂಚಿಕೊಂಡು, ಪ್ರಯಾಣದ ಸಮಯದಲ್ಲಿ ನಿಗಾ ಮತ್ತು ಸಹಾಯ ಒದಗಿಸಲಾಗಿದೆ. ಗಮ್ಯಸ್ಥಾನದಲ್ಲಿ ಅವರ ಅಭಿಪ್ರಾಯವನ್ನೂ ಸಂಗ್ರಹಿಸಲಾಗಿದೆ. ಪ್ರಸ್ತುತ 32 ರೈಲುಗಳು ಈ ಯೋಜನೆಯಡಿ ಒಳಗೊಂಡಿವೆ.
ಆಪರೇಶನ್ ಡಿಗ್ನಿಟಿ’:
ಆಪರೇಶನ್ ಡಿಗ್ನಿಟಿಕಾರ್ಯಾಚರಣೆಯಡಿ ಆರೈಕೆ ಅಗತ್ಯವಿದ್ದ ಒಬ್ಬ ಹಿರಿಯ ಮಹಿಳೆಯನ್ನು ರಕ್ಷಿಸಿ, ಪರಿಶೀಲನೆಯ ನಂತರ ಅವರ ಕುಟುಂಬಕ್ಕೆ ಅಥವಾ ಸಂಬಂಧಿತ ಎನ್ಜಿಒಗೆ ಒಪ್ಪಿಸಲಾಗಿದೆ.
ನೈಋತ್ಯ ರೈಲ್ವೆಯ ಹೆಚ್ಚುವರಿ ಮಹಾ ಪ್ರಬಂಧಕರಾದ ಪಿ. ಅನಂತ್ ಅವರು ಪ್ರಯಾಣಿಕರ ಸುರಕ್ಷತೆಗಾಗಿ ಕಾರ್ಯನಿರ್ವಹಿಸುತ್ತಿರುವ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ್ದು, ಪ್ರತಿಯೊಬ್ಬ ಪ್ರಯಾಣಿಕರ ಕಲ್ಯಾಣಕ್ಕಾಗಿ ರೈಲ್ವೆಯು ಹೊಂದಿರುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ರೈಲ್ವೆ ಆಸ್ತಿಯ ರಕ್ಷಣೆಯೊಂದಿಗೆ ಪ್ರಯಾಣಿಕರ ಸುರಕ್ಷತೆ ಮತ್ತು ಕಲ್ಯಾಣವನ್ನು ಕಾಪಾಡುವಲ್ಲಿ ರೈಲ್ವೆ ರಕ್ಷಣಾ ಪಡೆ ತನ್ನ ಅಚಲ ಬದ್ಧತೆಯನ್ನು ಮುಂದುವರಿಸಿಕೊಂಡಿದೆ. ಪ್ರಯಾಣಿಕರಿಗೆ ಸುರಕ್ಷಿತ, ಭದ್ರ ಮತ್ತು ಸುಗಮ ಪ್ರಯಾಣದ ಅನುಭವವನ್ನು ಒದಗಿಸಲು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎ೦ದು ನೈಋತ್ಯ ರೈಲ್ವೆ, ಪ್ರಕಟಣೆ ತಿಳಿಸಿದೆ.


