31.5 C
Karnataka
Wednesday, May 13, 2026

ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್ ಅವರಿಗೆ ಅಭಿನಂದನಾ ಸಮಾರಂಭ

ಮಂಗಳೂರು: 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮಂಗಳೂರಿನ ಖ್ಯಾತ ಕೊಂಕಣಿ ಸಾಹಿತಿ / ಪತ್ರಕರ್ತ ಎಚ್.ಎಂ. ಪೆರ್ನಾಲ್ (ಹೆನ್ರಿ ಮೆಂಡೋನ್ಸಾ ) ಅವರಿಗೆ ಮೇ 15ರಂದು ಸಂಜೆ 5.45ಕ್ಕೆ ಅದ್ಧೂರಿ ಅಭಿನಂದನಾ ಸಮಾರಂಭವನ್ನು ನಗರದ ಟೌನ್ ಹಾಲ್ ನಲ್ಲಿ ಆಯೋಜಿಸಲಾಗಿದೆ.


ಅನಿವಾಸಿ ಉದ್ಯಮಿ ಮತ್ತು ಉದಾರ ದಾನಿ ಮೈಕಲ್ ಡಿಸೋಜಾ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಖ್ಯಾತ ಕನ್ನಡ ಕವಿ ಮತ್ತು ಸಾಹಿತಿ ಜಯಂತ್ ಕಾಯ್ಕಿಣಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ದ್ದಾರೆ. ಈ ಮಹತ್ವದ ಕಾರ್ಯಕ್ರಮವನ್ನು ಅಭಿನಂದನಾ ಸಮಿತಿಯ ಸಂಚಾಲಕರಾದ ಮೆಲ್ವಿನ್ ರೊಡ್ರಿಗಸ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದೆ ಎ೦ದು ಟಾಯ್ಟಸ್ ನೊರೊನ್ಹಾ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮವು ಸಂಜೆ 5.30ಕ್ಕೆ ಆರಂಭವಾಗಲಿದೆ. ಸಂಜೆ 5:45ಕ್ಕೆ ಉಸ್ತಾದ್ ರಫೀಕ್ ಖಾನ್ ಮತ್ತು ಅವರ ಸಂಗಾತಿಗಳಿಂದ ‘ಸಿತಾರ್ ಫ್ಯೂಷನ್’ ಎಂಬ ವಿಶಿಷ್ಟ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 6:30ಕ್ಕೆ ಎಡ್ಡಿ ಸಿಕೇರ್ ಮತ್ತು ಮುಹಮ್ಮದ್ ಮುಆದ್ ಜಿ.ಎಂ. ಅವರಿಂದ ಎಚ್.ಎಂ. ಪೆರ್ನಾಲ್ ಅವರ ಕವಿತೆಗಳ ಸಾದರೀಕರಣದ ಮೂಲಕ ಸುಂದರವಾದ ಕವಿತಾ ಸಂಭ್ರಮ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸಂಜೆ 7:00ಕ್ಕೆ ‘ಜಿವಿತಾಚೊ, ಸಾಹಿತ್ಯಾಚೊ ಸಂಭ್ರಮ್’ ಅಂಗವಾಗಿ ಶಕುಂತಳಾ ಆರ್. ಕಿಣಿ ಮತ್ತು ವಿಲ್ಸನ್ ಕಟೀಲ್ ಅವರು ಎಚ್.ಎಂ. ಅವರೊಂದಿಗೆ ವಿಶೇಷ ಸಂವಾದ ನಡೆಸಲಿದ್ದಾರೆ. ಸಮಾರಂಭದ ಪ್ರಮುಖ ಘಟ್ಟವಾದ ‘ಅಭಿನಂದನ್ ಸಂಭ್ರಮ್’ ಸಂಜೆ 7:30ಕ್ಕೆ ಶುರುವಾಗಲಿದ್ದು, ಟಾಯ್ಟಸ್ ನೊರೊನ್ಹಾ ಅವರಿಂದ ಪ್ರಾಸ್ತಾವಿಕ ನುಡಿಗಳು ಇರಲಿವೆ. ತದನಂತರ ಎಮ್‌ಡಿವಿಕೆ-ಎಚ್ಚೆಮ್ ಅಭಿನಂದನ್ ಸಮಿತಿ ಹಾಗೂ ವಿವಿಧ ಕೊಂಕಣಿ ಸಂಘ-ಸಂಸ್ಥೆಗಳ ವತಿಯಿಂದ ಪೆರ್ನಾಲ್ ಅವರಿಗೆ ಸನ್ಮಾನ ನಡೆಯಲಿದೆ. ಸನ್ಮಾನದ ಜೊತೆಗೆ ಸನ್ಮಾನಿತರಾದ ಎಚ್.ಎಂ. ಪೆರ್ನಾಲ್, ಮುಖ್ಯ ಅತಿಥಿ ಜಯಂತ್ ಕಾಯ್ಕಿಣಿ ಮತ್ತು ಅಧ್ಯಕ್ಷರಾದ ಮೈಕಲ್ ಡಿಸೋಜಾ ಅವರ ಭಾಷಣಗಳು ಇರಲಿವೆ. ಈ ಸಂಪೂರ್ಣ ಕಾರ್ಯಕ್ರಮವು ರಾತ್ರಿ 8:30 ಕ್ಕೆ ಮುಕ್ತಾಯಗೊಳ್ಳಲಿದೆ.
ಎಚ್.ಎಂ. ಪೆರ್ನಾಲ್ ಅವರ ಪ್ರಶಂಸಿತ ಸಾಹಿತ್ಯ ವಿಮರ್ಶೆ ಕೃತಿಯಾದ ಕೊಂಕಣಿ ಕಾವ್ಯೆಂ: ರುಪಾಂ ಆನಿ ರೂಪಕಾಂ (2021) ಪುಸ್ತಕಕ್ಕೆ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿದೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಭಾರತ ಸರಕಾರ ಸಾಹಿತ್ಯಕ್ಕಾಗಿ ನೀಡುವ ದೇಶದ ಅತ್ಯುನ್ನತ ಪ್ರಶಸ್ತಿಯಾಗಿದೆ. ಹಿಂದೆ ಮಂಗಳೂರಿನ ಚಾ. ಫ್ರಾ. ದೆಕೊಸ್ತಾ (1992) ಮತ್ತು ಮೆಲ್ವಿನ್ ರೊಡ್ರಿಗಸ್ (2011) – ಕವನ ಸಂಕಲನಗಳಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದರೆ, 2016 ರಲ್ಲಿ ಎಡ್ವಿನ್ ಜೆ.ಎಫ್.ಡಿ. ಸೊಜಾ ಕಾದಂಬರಿಗಾಗಿ – ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು. ಎಚ್. ಎಂ. ಪೆರ್ನಾಲ್ ಅವರು ಈ ಪರಂಪರೆಯನ್ನು ಮುಂದುವರೆಸುತ್ತಿರುವ ಕರ್ನಾಟಕದ ನಾಲ್ಕನೇ ಕೊಂಕಣಿ ಸಾಹಿತಿಯಾಗಿದ್ದಾರೆ.
ರುಪಾಂ ಆನಿ ರೂಪಕಾಂ ಕೃತಿಯು ಸಾಹಿತ್ಯ ವಿಮರ್ಶೆ ವಿಭಾಗದಲ್ಲಿ ಪ್ರಶಸ್ತಿ ಪಡೆದ ಮೊದಲ ಕೊಂಕಣಿ ಕೃತಿ ಎಂಬ ಐತಿಹಾಸಿಕ ಮೈಲುಗಲ್ಲನ್ನು ಸೃಷ್ಟಿಸಿದೆ. ಈ ಕೃತಿಗೆ ಮೊದಲು 2021 ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಪುಸ್ತಕ ಪ್ರಶಸ್ತಿ ಮತ್ತು 2023 ರಲ್ಲಿ ಗೋವಾ ಕೊಂಕಣಿ ಅಕಾಡೆಮಿಯಿಂದ ಉತ್ತಮ ಪುಸ್ತಕ ಪ್ರಶಸ್ತಿ ಲಭಿಸಿತ್ತು. ಈ ಪುಸ್ತಕಕ್ಕೆ ಜ್ಞಾನಪೀಠ ಪ್ರಶಸ್ತಿ ವಿಜೇತ ಕೊಂಕಣಿ ಸಾಹಿತಿ ದಾಮೋದರ್ ಮೌಜೋ ಅವರು ವಿಸ್ತೃತ ಮುನ್ನುಡಿ ಬರೆದಿದ್ದು, ಮಂಗಳೂರಿನ ಕವಿತಾ ಪಬ್ಲಿಕೇಷನ್ಸ್ ಈ ಪುಸ್ತಕವನ್ನು ಪ್ರಕಟಿಸಿದ್ದಾರೆ.
ಉಡುಪಿ ಜಿಲ್ಲೆಯ ಪೆರ್ನಾಲ್ ನಲ್ಲಿ ಹುಟ್ಟಿ, ಶಿರ್ವದ ಹಿಂದೂ ಜೂನಿಯರ್ ಕಾಲೇಜು ಮತ್ತು ಎಂ.ಎಸ್.ಆರ್.ಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ, ಮುಂಬಯಿಯಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದಿರುವ ಹೆನ್ರಿ ಮೆಂಡೋನ್ಸಾ ವೃತ್ತಿಯಲ್ಲಿ ಕಮರ್ಶಿಯಲ್ ಅಕೌಂಟೆಂಟ್. ಕನ್ನಡದಲ್ಲಿ – ತರಂಗ, ಸಂಕ್ರಮಣ, ಶೂದ್ರ ಮುಂತಾದ ಪತ್ರಿಕೆಗಳ ಮೂಲಕ ಬರವಣಿಗೆ ಆರಂಭಿಸಿದ ಅವರು 1980 ರ ದಶಕದ ಆರಂಭದಲ್ಲಿ ಯುವಕ್ ಮಾಸಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ಕೊಂಕಣಿಗೆ ಪಾದಾರ್ಪಣೆ ಮಾಡಿ ಪ್ರಸ್ತುತ – ಕಥೆಗಾರ, ಕವಿ, ವಿಮರ್ಶಕ, ಸಂಪಾದಕ, ಪ್ರಕಾಶಕರಾಗಿ ತಮ್ಮದೇ ಛಾಪು ಮೂಡಿಸಿರುತ್ತಾರೆ. 2011 ರಲ್ಲಿ ಅವರು ಸ್ಥಾಪಿಸಿದ ಕಿಟಾಳ್ ಸಾಹಿತ್ಯಿಕ ಅಂತರ್ಜಾಲ ಪತ್ರಿಕೆ ಹಿರಿ – ಕಿರಿಯ ಲೇಖಕರನ್ನೊಳಗೊಂಡು ಸತತ ಹದಿನಾಲ್ಕನೇ ವರ್ಷದಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದು, ಡಿಜಿಟಲ್ ಕೊಂಕಣಿ ಸಾಹಿತ್ಯ ನಿರ್ಮಿತಿಯಲ್ಲಿ ಮುಂಚೂಣಿಯಲ್ಲಿದೆ. 2013 ರಲ್ಲಿ ಪಾಕ್ಷಿಕವಾಗಿ ಆರಂಭಿಸಿದ ಆರ್ಸೊ ಸಾಹಿತ್ಯ ಪತ್ರಿಕೆ ಪ್ರಸ್ತುತ ಕವಿ ವಿಲ್ಸನ್ ಕಟೀಲ್ ಸಂಪಾದಕತ್ವದಲ್ಲಿ ಮಾಸಪತ್ರಿಕೆಯಾಗಿ ಹನ್ನೆರಡನೇ ವರ್ಷದಲ್ಲಿ ಪ್ರಕಟವಾಗುತ್ತಿದ್ದು, ಆರ್ಸೊ ವಾರ್ಷಿಕ ವಿಶೇಷಾಂಕಗಳಿಗೆ ಸಾಹಿತ್ಯ ವಿಶ್ವದಲ್ಲಿ ವಿಶೇಷ ಮಾನ್ಯತೆಯಿದೆ. ತಮ್ಮದೇ ಕಿಟಾಳ್ ಪ್ರಕಾಶನ ದ ಮೂಲಕ ಈ ವರೆಗೆ 15 ಕ್ಕೂ ಮಿಕ್ಕಿ ಮೌಲಿಕ ಸಾಹಿತ್ಯ ಕೃತಿಗಳನ್ನೂ ಪೆರ್ನಾಲ್ ಪ್ರಕಟಿಸಿದ್ದಾರೆ.
ಈವರೆಗೆ ಪೆರ್ನಾಲ್ ಅವರ ನಾಲ್ಕು ಕವನ ಸಂಕಲನಗಳು — ಚಲ್ಯಾಂಕ್ ಚತ್ರಾಯ್ (1999), ಕಯ್ದ್ಯಾಚ್ಯೊ ಕವಿತಾ (2004), ಭಾಮುಣಾಂಚೆಂ ಚೆಡುಂ (2006) ಮತ್ತು ಜನೆಲ್ (2025), ಎರಡು ಕಥಾ ಸಂಕಲನಗಳು — ದೆವಾಕ್ ಸೊಡುಲ್ಲೊ ಪಾಡೊ (2002) ಮತ್ತು ಬೀಗ್ ಆನಿ ಬಿಗಾತ್ (2016) ಹಾಗೂ ಪ್ರಶಸ್ತಿ ವಿಜೇತ ಸಾಹಿತ್ಯ ವಿಮರ್ಶೆಯ ಕೃತಿ ಕೊಂಕಣಿ ಕಾವ್ಯೆಂ : ರುಪಾಂ ಆನಿ ರೂಪಕಾಂ (2021) ಪ್ರಕಟವಾಗಿವೆ.
ಅವರ ಬೀಗ್ ಆನಿ ಬಿಗಾತ್ ಕಥಾ ಸಂಕಲನಕ್ಕೆ ವಿಶ್ವ ಕೊಂಕಣಿ ಕೇಂದ್ರದ – ಖ್ಯಾತ ಉದ್ಯಮಿ ಟಿ. ವಿ. ಮೋಹನದಾಸ ಪೈ – ತಾಯಿಯ ಹೆಸರಿನಲ್ಲಿ ಕೊಡಮಾಡುವ ಶ್ರೀಮತಿ ವಿಮಲಾ ವಿ ಪೈ ಅತ್ಯುತ್ತಮ ಸಾಹಿತ್ಯ ಕೃತಿ ಪ್ರಶಸ್ತಿ (2017), ಕೊಂಕಣಿ ಕಾವ್ಯಕ್ಕೆ ನೀಡಿರುವ ಕೊಡುಗೆಗೆ, ಕವಿತಾ ಟ್ರಸ್ಟ್ ನೀಡುವ ಮಥಾಯಸ್ ಕುಟುಂಬ ದತ್ತಿ ಕಾವ್ಯ ಪ್ರಶಸ್ತಿ (2018), ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಕೊಂಕಣಿ ಕಾವ್ಯೆಂ : ರುಪಾಂ ಆನಿ ರೂಪಕಾಂ ಪುಸ್ತಕಕ್ಕೆ ಅತ್ಯುತ್ತಮ ಪುಸ್ತಕ ಪ್ರಶಸ್ತಿ (2021), ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಕೊಂಕಣಿ ಸಾಹಿತ್ಯ ಗೌರವ ಪ್ರಶಸ್ತಿ (2022), ಕೊಂಕಣಿ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2023) ಮತ್ತು ಕೊಂಕಣಿ ಕಾವ್ಯೆಂ: ರುಪಾಂ ಆನಿ ರೂಪಕಾಂ ಪುಸ್ತಕಕ್ಕೆ ಗೋವಾ ಕೊಂಕಣಿ ಅಕಾಡೆಮಿಯಿಂದ ಉತ್ತಮ ಪುಸ್ತಕ ಪ್ರಶಸ್ತಿ (2023) ಲಭಿಸಿರುತ್ತದೆ.850ಕ್ಕೂ ಹೆಚ್ಚು ಕವಿತೆಗಳು, 100+ ಕಥೆಗಳು ಮತ್ತು 2,000 ಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಪೆರ್ನಾಲ್ ಅವರು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಕೊಂಕಣಿ ಸಾಹಿತ್ಯವನ್ನು ಪೋಷಿಸುತ್ತಾ ಬಂದಿದ್ದು, 2012 ರಿಂದ ಉದಯೋನ್ಮುಖ ಬರಹಗಾರರನ್ನು ಗುರುತಿಸಿ ಪ್ರತೀ ವರ್ಷ ಅಬುದಾಬಿಯ ಉದ್ಯಮಿ, ದಾನಿ ಲಿಯೋ ರೊಡ್ರಿಗಸ್ ಕುಟುಂಬ ದತ್ತಿ ಕಿಟಾಳ್ ಯುವ ಪುರಸ್ಕಾರವನ್ನು ನೀಡುತ್ತಾ ಬಂದಿರುತ್ತಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮೆಲ್ವಿನ್ ರೊಡ್ರಿಗಸ್, ಎಡ್ಡಿ ಸಿಕ್ವೇರಾ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles