24.5 C
Karnataka
Thursday, April 30, 2026

ಬಂಟ್ವಾಳದ 11 ಕಡೆ ಆಯುಷ್ಮಾನ್ ಭಾರತ್-ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ(HWC) ಸ್ಥಾಪನೆಗೆ ಗುದ್ದಲಿಪೂಜೆ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಮೂಲ ಸೌಕರ್ಯ ಮಿಷನ್‌ ಹಾಗೂ 15ನೇ ಹಣಕಾಸು ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 124 ಆಯುಷ್ಮಾನ್ ಭಾರತ್-ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ(HWC) ಸ್ಥಾಪನೆಗೆ ಅನುದಾನ ಮಂಜೂರಾಗಿದೆ. ಆ ಪೈಕಿ ಬಂಟ್ವಾಳದಲ್ಲಿ ಇಂದು ಒಟ್ಟು 11 HWC ಕೇಂದ್ರಗಳ ಸ್ಥಾಪನೆಗೆ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಶಾಸಕ ರಾಜೇಶ್ ನಾಯ್ಕ್ ಜೊತೆಗೂಡಿ ಮೂಡುಪಡುಕೋಡಿನಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಸಂಸದ ಕ್ಯಾ. ಚೌಟ ಅವರು, ಬಂಟ್ವಾಳ ತಾಲೂಕಿನಲ್ಲಿ ಗ್ರಾಮೀಣ ಭಾಗದ ಆರೋಗ್ಯ ಸುಧಾರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ 15ನೇ ಹಣಕಾಸು ಯೋಜನೆಯಡಿ 24 ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್‌ನಡಿ 9 ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ಸ್ಥಾಪನೆಗೆ ಅನುದಾನ ಮಂಜೂರಾಗಿದೆ. ಆ ಪ್ರಕಾರ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 11 ಕಡೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಉಳಿದ 11 ಕಡೆ ಟೆಂಡರ್‌ ಪ್ರಕ್ರಿಯೆ ಕೂಡ ಪ್ರಗತಿಯಲ್ಲಿದೆ. ಆ ಮೂಲಕ, ಅನುದಾನ ಮಂಜೂರಾಗಿರುವ ಎಲ್ಲ ಕಡೆ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ಸ್ಥಾಪನೆ ಶೀಘ್ರದಲ್ಲೇ ಕಾಮಗಾರಿಗಳು ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಪ್ರತಿ ಆಯುಷ್ಮಾನ್ ಭಾರತ್-ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ ಸ್ಥಾಪನೆಗೆ 65 ಲಕ್ಷ ರೂ. ಮಂಜೂರಾಗಿದೆ. ಈ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡವು ಒಟ್ಟು ಸುಮಾರು 2000 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ನೆಲ ಮಹಡಿಯಲ್ಲಿ ಕ್ಲಿನಿಕ್‌, ಕ್ಷೇಮ ಕೇಂದ್ರ, ಡೇ ಕೇರ್‌ ಹಾಗೂ ಶೌಚಾಲಯ ಸೌಲಭ್ಯವನ್ನು ಹೊಂದಿರುತ್ತದೆ. ಹಾಗೆಯೇ ಮೊದಲ ಮಹಡಿಯಲ್ಲಿ ಆರೋಗ್ಯಾಧಿಕಾರಿಯವರ ವಸತಿಗೃಹ ಹೊಂದಿರುತ್ತದೆ. ಈ ಹೆಲ್ತ್‌ ಸೆಂಟರ್‌ಗಳ ನಿರ್ಮಾಣದಿಂದ ಗ್ರಾಮೀಣ ಭಾಗದ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆಗಳು ದೊರೆಯಲಿದೆ ಎಂದು ಕ್ಯಾ. ಚೌಟ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆರೋಗ್ಯ ಮೂಲ ಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ 15ನೇ ಹಣಕಾಸು ಯೋಜನೆಯಡಿ ಕೇಂದ್ರ ಸರ್ಕಾರವು ಈಗಾಗಲೇ ಒಟ್ಟು 124 ಕಡೆ ಈ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ(HWC) ನಿರ್ಮಾಣಕ್ಕೆ ಒಟ್ಟು 80 ಕೋಟಿ ರೂ. ಹೆಚ್ಚು ಅನುದಾನವನ್ನು ಮಂಜೂರು ಮಾಡಲಾಗಿದೆ. ಆ ಪ್ರಕಾರ, ಪುತ್ತೂರು ತಾಲೂಕಿನಲ್ಲಿ 18, ಬೆಳ್ತಂಗಡಿಯಲ್ಲಿ 26, ಸುಳ್ಯದಲ್ಲಿ 27, ಬಂಟ್ವಾಳದಲ್ಲಿ 33, ಮೂಡುಬಿದಿರೆಯಲ್ಲಿ 12, ಮಂಗಳೂರಿನಲ್ಲಿ 8 ಎಚ್‌ಡಬ್ಲ್ಯುಸಿ ಕೇಂದ್ರ ಸ್ಥಾಪನೆಗೆ ಅನುದಾನ ಮಂಜೂರು ಆಗಿದೆ ಎಂದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲೆಲ್ಲಿ HWC ಕೇಂದ್ರಗಳ ಸ್ಥಾಪನೆ:
ಬಡಗ ಬೆಳ್ಳೂರು, ಅನಂತಾಡಿ, ಅಮ್ಟಾಡಿ, ಸರಪಾಡಿ, ದೇವಸ್ಯಪಡೂರು, ಮೂಡುಪಡುಕೋಡಿ, ವೀರಕಂಬ, ಮಂಗಿಲ ಪದವು, ಗಡಿಯಾರ, ಬಾಳ್ತಿಲ, ಅಮ್ಟೂರು, ಪಾಣೆ ಮಂಗಳೂರು, ಪೊಳಲಿ, ಉಳಿ, ಶಂಭೂರು, ಸೂರಿಬೈಲು, ಕೋಲ್ನಾಡು, ಕುಳಾಲು, ಕುರಿಯಾಳ, ಕಲಿಗೆ, ಕಾವಳಕಟ್ಟೆ, ಕರ್ಪೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles