ಮ೦ಗಳೂರು: “ಲಿಂಗ ಸಮಾನತೆ ಮತ್ತು ನ್ಯಾಯ” ಕುರಿತ ಪ್ರೇರಣಾದಾಯಕ ತಂಡ ತರಬೇತಿ ಕಾರ್ಯಕ್ರಮ ನವೆಂಬರ್ 17ರಂದು ಸಿಒಡಿಪಿಯಲ್ಲಿ ಆಯೋಜಿಸಲಾಯಿತು. KROSS ಬೆಂಗಳೂರು ಹಾಗೂ ಸಿಒಡಿಪಿ ® ಮಂಗಳೂರಿನ ಸಹಯೋಗದಲ್ಲಿ ಮಹಿಳಾ ಸದೃಢೀಕರಣ ಯೋಜನೆ ಘಟಕದಡಿ ಈ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ರಾಜಶೇಖರ್, ಸಂಯೋಜಕ – ಮಹಿಳಾ ಸದೃಢೀಕರಣ ಯೋಜನೆ (KROSS, ಬೆಂಗಳೂರು), ಡಾ. ರೋಹನ್ ಎಸ್. ಮೊನಿಸ್, ಮುಖ್ಯ ಆಡಳಿತಾಧಿಕಾರಿ – ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ದೇರಳಕಟ್ಟೆ ಹಾಗೂ ಸಿಒಡಿಪಿ ಲಿಂಗ ಸಮಾನತೆ ಮತ್ತು ನ್ಯಾಯ ಬಾಹ್ಯ ತಂಡದ ಮುಖ್ಯಸ್ಥರು ಮತ್ತು ದಕ್ಷಿಣ ಕೆನರಾ ಕ್ಯಾಥೊಲಿಕ್ ಅಸೋಸಿಯೇಶನ್ನ ಉಪಾಧ್ಯಕ್ಷರು, ಮರ್ಲಿನ್ ಮಾರ್ಟಿಸ್ – ನಿರ್ದೇಶಕಿ, ಡೀಡ್ಸ್ ಸೋಷಿಯಲ್ ಸರ್ವಿಸ್; ಸೀಮಾ – ಕಾರ್ಯದರ್ಶಿ, ಮಾನಿನಿ ರಾಜ್ಯ ಮಹಿಳಾ ಮಹಾಸಂಘ ಹಾಗೂ ರೆ। ವಿನ್ಸೆಂಟ್ ಡಿಸೋಜಾ – ನಿರ್ದೇಶಕರು, ಸಿಒಡಿಪಿ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾದ ಮರ್ಲಿನ್ ಮಾರ್ಟಿಸ್ ಅವರು ಲಿಂಗ ಸಮಾನತೆ ಮತ್ತು ನ್ಯಾಯದ ಮಹತ್ವವನ್ನು ವಿವರಿಸಿ, ಕುಟುಂಬಗಳಲ್ಲಿ ಇದರ ಪರಿಣಾಮಕಾರಿ ನಿರ್ವಹಣೆ ಮತ್ತು ಪಾಲಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ನೀಡಬೇಕಾದ ಜಾಗೃತಿಯ ಬಗ್ಗೆ ತಿಳಿಸಿದರು. ಸಿಒಡಿಪಿ ಅಡಿಯಲ್ಲಿ ಇರುವ ಆಂತರಿಕ ಮತ್ತು ಬಾಹ್ಯ ತಂಡಗಳು ಸಮುದಾಯ ಮಟ್ಟದಲ್ಲಿ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಹೇಗೆ ಪರಸ್ಪರ ಸಹಕರಿಸಬಹುದು ಎಂಬುದನ್ನೂ ಅವರು ವಿವರಿಸಿದರು. ಸಮತೋಲಿತ ಮತ್ತು ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಪುರುಷರು ಮತ್ತು ಮಹಿಳೆಯರು ಇಬ್ಬರೂ ಅವಿಭಾಜ್ಯ ಅಂಗಗಳೆಂದು ಅವರು ಒತ್ತಿ ಹೇಳಿದರು.
ಮಹಿಳಾ ಸದೃಢೀಕರಣ ಯೋಜನೆಯ ಸಂಯೋಜಕಿ ಸುಪ್ರಿಯಾ ಕಾರ್ಯಕ್ರಮವನ್ನು ನಿರ್ವಹಿಸಿದರು. ರೆ। ವಿನ್ಸೆಂಟ್ ಡಿಸೋಜಾ ಸ್ವಾಗತಿಸಿದರು. ಡಾ. ರೋಹನ್ ಮೊನಿಸ್ ಸಮಾಜದಲ್ಲಿ ಲಿಂಗ ಅಸಮಾನತೆ ವಿರುದ್ಧ ಸಕಾರಾತ್ಮಕ ಧ್ವನಿಯಾಗಿ ನಿಲ್ಲಲು ಪ್ರೇರೇಪಿಸಿದರು. ಸೀಮಾ ವ೦ದಿಸಿದರು.


