ಮಂಗಳೂರು: ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಂದ ರಕ್ಷಣೆ ನೀಡುವ ಉದ್ದೇಶದಿಂದ ರೂಪಿಸಲಾದ ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮವು ಗುರುವಾರ ಮಂಗಳೂರು ಉರ್ವಾ ಲೇಡಿಹಿಲ್ ಸೆಂಟ್ರಲ್ ಸ್ಕೂಲ್(ಐಸಿಎಸ್ಇ)ಯಲ್ಲಿ ಆಯೋಜಿಸಲಾಯಿತು. ಮಕ್ಕಳ ಸುರಕ್ಷತೆ, ಪೋಷಕರು –ಶಿಕ್ಷಕರು ಮತ್ತು ಸಮಾಜದ ಜವಾಬ್ದಾರಿ ಹಾಗೂ ಕಾಯ್ದೆಯ ವಿಧಿ-ವಿಧಾನಗಳ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮೋಹನ ಜೆ.ಎಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ರಕ್ಷಣೆಗೆ ಜಾಗ್ರತೆ, ಕಾನೂನು ಅರಿವು ಹಾಗೂ ಸಮೂಹದ ಜವಾಬ್ದಾರಿಯ ಅಗತ್ಯತೆಯನ್ನು ವಿವರಿಸಿದರು.
ಹಿರಿಯ ವಕೀಲ ಕೆ. ನಿಕೇಶ್ ಶೆಟ್ಟಿ ಅವರು ಜಾಗೃತಿ ಉಪನ್ಯಾಸ ನೀಡಿದರು. ಅವರು 2012ರಲ್ಲಿ ಜಾರಿಗೆ ಬಂದ ಪೋಕ್ಸೋ ಕಾಯ್ದೆಯ ಮಹತ್ವವನ್ನು ವಿವರಿಸಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ಇದು ಬಲವಾದ ಕಾನೂನು ರಕ್ಷಣೆಯನ್ನು ಒದಗಿಸುತ್ತದೆಯೆಂದು ಹೇಳಿದರು. ಮಕ್ಕಳು ತಮ್ಮ ಸಮಸ್ಯೆಗಳನ್ನು ಭಯದಿಂದಲೋ, ಅಜ್ಞಾನದ ಕಾರಣದಿಂದಲೋ ಹೇಳಲು ಹಿಂಜರಿಯುವ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವುದು ಅಪರಾಧಿಗಳ ತಂತ್ರವಾಗಿರುವುದನ್ನು ಅವರು ಹೇಳಿದರು.
ಅವರು ಕಾಯ್ದೆಯಡಿ ಒಳಗೊಂಡಿರುವ ದೈಹಿಕ ಹಾಗೂ ಅದೈಹಿಕ ಅಪರಾಧಗಳಾದ ಲೈಂಗಿಕ ಕಿರುಕುಳ, ದುರ್ಬಳಕೆ, ಮಕ್ಕಳ ಅಶ್ಲೀಲತೆ ಮುಂತಾದ ಅಂಶಗಳನ್ನು ವಿವರಿಸಿದರು. ಮಕ್ಕಳು “ಸುರಕ್ಷಿತ – ಅಸುರಕ್ಷಿತ” ವರ್ತನೆಗಳ ಬಗ್ಗೆ ತಿಳಿದುಕೊಳ್ಳುವಂತೆ ಮಾಡಲು ಹಾಗೂ ಅಪರಾಧ ಕಂಡೊಡನೆಯೇ ವರದಿ ಮಾಡುವ ಜವಾಬ್ದಾರಿ ಶಿಕ್ಷಕರು ಮತ್ತು ವಯಸ್ಕರ ಮೇಲಿದೆ ಎಂದು ತಿಳಿಸಿದರು. ವರದಿ ಮಾಡದಿದ್ದರೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂಬುದನ್ನು ಅವರು ನೆನಪಿಸಿದರು. ಸಂವಿಧಾನದ ವಿಧಿ 15 ರ ಪ್ರಕಾರ ಮಕ್ಕಳಿಗೆ ಸಮಾನತೆ ಮತ್ತು ವಿಶೇಷ ರಕ್ಷಣೆಯ ಹಕ್ಕಿದೆ ಎಂದು ಅವರು ಉಲ್ಲೇಖಿಸಿದರು. ನೈಜ ಉದಾಹರಣೆಗಳ ಮೂಲಕ ಶಿಕ್ಷಕರು ಮಕ್ಕಳೊಂದಿಗೆ ಎಚ್ಚರಿಕೆಯಿಂದ, ಸುಲಭವಾಗಿ ಸಂಪರ್ಕವಾಗುವಂತೆ, ಹಾಗೂ ಬೆಂಬಲಕಾರಿ ಧೋರಣೆ ಹೊಂದಬೇಕೆಂದು ತಿಳಿಸಿದರು.
ಸಹಾಯಕ ಕಾನೂನು ಸಹಾಯ ರಕ್ಷಣಾ ವಕೀಲ ಕಿರಣ್, ಲೇಡಿಹಿಲ್ ಸೆಂಟ್ರಲ್ ಸ್ಕೂಲ್ ಐಸಿಎಸ್ಇ ಪ್ರಾಂಶುಪಾಲೆ ವಂ.ಭಗಿನಿ ಜೆನಿಫರ್ ಮೋರಾಸ್, ಲೇಡಿಹಿಲ್ ಕನ್ನಡ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯನಿ ವಂ.ಭಗಿನಿ ಮ್ಯಾಗ್ದಲಿನ್, ಹಾಗೂ ಲೇಡಿಹಿಲ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ವಂ.ಭಗಿನಿ ಶರ್ಮಿಳಾ ಉಪಸ್ಥಿತರಿದ್ದರು.
ಪೆÇೀಕ್ಸೋ ಸಮಿತಿ ಸಂಯೋಜಕಿ ಎಲಿಜಬೆತ್ ಪಿ.ಡಿ. ನಿರೂಪಿಸಿ, ಸಹಾಯಕ ಶಿಕ್ಷಕಿ ನವೋಮಿ ಸ್ವಾಗತಿಸಿ, ಸಹಾಯಕ ಶಿಕ್ಷಕಿ ಕೀರ್ತಿ ವಂದಿಸಿದರು.


