ಮಂಗಳೂರು: ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಸರಕಾರಿ ವಕೀಲರ ಅಧೀನದಲ್ಲಿ 4 ವರ್ಷಗಳ ಅವಧಿಯ ಉಚಿತ ಕಾನೂನು ತರಬೇತಿಯನ್ನು ನೀಡುವ ಕಾರ್ಯಕ್ರಮದಡಿ, ಕಾನೂನು ತರಬೇತಿ ಪಡೆಯಲು ಬಯಸುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಗೆ ಸೇರಿದ ಕಾನೂನು ಪದವೀಧರರಿಂದ 2025-26ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಯು ಬಾರ್ ಕೌನ್ಸಿಲ್ನಲ್ಲಿ ನೋಂದಾಯಿತರಾದ ಕಾನೂನು ಪದವೀಧರರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯವು ಪ್ರವರ್ಗ-1 ರ ಅಭ್ಯರ್ಥಿಗಳಿಗೆ ರೂ.3.50 ಲಕ್ಷ ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.2.50 ಲಕ್ಷವನ್ನು ಮೀರಿರಬಾರದು. ಪ್ರವರ್ಗ-1 ರ ಅಭ್ಯರ್ಥಿಗಳು 40 ವರ್ಷಗಳು ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು 38 ವರ್ಷದೊಳಗಿನ ಗರಿಷ್ಠ ವಯೋಮಿತಿಯವರಾಗಿರಬೇಕು. ತರಬೇತಿ ಅವಧಿಯಲ್ಲಿ ಹಾಜರಾತಿಗನುಸಾರವಾಗಿ ತಿಂಗಳಿಗೆ ರೂ.4,000 ತರಬೇತಿ ಭತ್ಯೆಯನ್ನು ಪಾವತಿಸಲಾಗುತ್ತದೆ.
ಅರ್ಜಿಯೊಂದಿಗೆ ವರ್ಗಾವಣೆ ಪ್ರಮಾಣ ಪತ್ರದ ಪ್ರತಿ, ಪದವಿ/ಕಾನೂನು ಪದವಿಯ ಅಂಕ ಪಟ್ಟಿಗಳು, ಬಾರ್ ಕೌನ್ಸಿಲ್ನಲ್ಲಿ ನೋಂದಾಯಿತರಾಗಿರುವ ಬಗ್ಗೆ ಪ್ರಮಾಣ ಪತ್ರ, ಜಾತಿ ಆದಾಯ ಪ್ರಮಾಣ ಪತ್ರ ಮತ್ತು ಇತ್ತೀಚಿನ ಎರಡು ಭಾವಚಿತ್ರಗಳನ್ನು (ಪಾಸ್ಪೋರ್ಟ್ ಸೈಜ್) ಲಗತ್ತಿಸಬೇಕು ಹಾಗೂ ಅರ್ಜಿಯನ್ನು ಆಗಸ್ಟ್ 18 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಅಥವಾ ನಿಗದಿತ ಅರ್ಜಿ ನಮೂನೆಯನ್ನು ಬಿಜೈ-ಕಾಪಿಕಾಡ್, ಆನೆಗುಂಡಿ ರೋಡ್ನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಯವರ ಕಚೇರಿ, ಸಂಪರ್ಕಿಸಬಹುದು ಎಂದು ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


